ಮೀನಿಗಾಗಿ ಹಾಕಿದ್ದ ಬಲೆಯಲ್ಲಿ ಸಿಲುಕಿದ ಕಾಡಾನೆ
ಗುಂಡ್ಲುಪೇಟೆ, ಜ19: ಮೀನಿಗಾಗಿ ಹಾಕಿದ್ದ ಬಲೆಗೆ ಕಾಡಾನೆ ಸಿಲುಕಿಕೊಂಡು ಪರದಾಡಿದ ಘಟನೆ ನುಗು ಜಲಾಶಯದಲ್ಲಿ ನಡೆದಿದೆ.
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ನುಗು ವಲಯಕ್ಕೆ ಸೇರಿದ ಕಾಡಾನೆ ನೀರಿಗೆ ಇಳಿದಿದೆ. ಈ ವೇಳೆ ಮೀನಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡು ಮೇಲಕ್ಕೆ ಬರಲಾಗದೇ ಪರದಾಡಿತು.
ನುಗು ಜಲಾಶಯದಲ್ಲಿ ಮೀನಿಗಾಗಿ ಬಲೆಹಾಕಿದ ಮೀನುಗಾರರು ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯ ಪ್ರವೃತ್ತಾರಾದ ಎ.ಸಿ.ಎಫ್.ರವಿಕುಮಾರ್ ಸರಗೂರುನಿಂದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜೊತೆಗಾಗಿ ಆನೆಯನ್ನು ನೀರಿನಿಂದ ದಡಕ್ಕೆ ಕರೆತರಲು ಹರಸಾಹಸಪಟ್ಟರು. ಬೋಟ್ ಮೂಲಕ ಬಲೆ ಬಿಡಿಸಲು ಯತ್ನಿಸಿದರು. ಅಗ್ನಿಶಾಮಕ ಸಿಬ್ಬಂದಿಗಳು ಆನೆಯನ್ನು ಬಲೆಯಿಂದ ರಕ್ಷಣೆ ಮಾಡಿ ಕಾಡಿಗೆ ಓಡಿಸಿದ್ದಾರೆ.
ಈ ಸಂದರ್ಭದಲ್ಲಿ ಹೆಡಿಯಾಲ ಸಹಾಯಕ ಸಂರಕ್ಷಾಧಿಕಾರಿ ರವಿಕುಮಾರ್, ನುಗು ವಲಯ ಅರಣ್ಯಾಧಿಕಾರಿ ಗೀತಾನಾಯಕ್ ಹಾಗೂ ಇತರರು ಹಾಜರಿದ್ದರು