ಕುತೂಹಲ ಮೂಡಿಸಿದ ಗೃಹ ಸಚಿವ ಬೊಮ್ಮಾಯಿ-ಕುಮಾರಸ್ವಾಮಿ ಭೇಟಿ
ಬೆಂಗಳೂರು, ಜ. 21: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ, ಹಿರಿಯ ಸಚಿವರು ಖಾತೆ ಅದಲು-ಬದಲು ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ಭುಗಿಲೆದ್ದಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಗುರುವಾರ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಖುದ್ದು ಭೇಟಿ ನೀಡಿದ ಕುಮಾರಸ್ವಾಮಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಸಚಿವರ ಖಾತೆ ಹಂಚಿಕೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಆದರೆ, ‘ಇದೊಂದು ವೈಯಕ್ತಿಕ ಭೇಟಿ ಅಷ್ಟೇ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದು ಉಭಯ ನಾಯಕರು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘ತಮ್ಮ ಹಾಗೂ ಗೃಹ ಸಚಿವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಯಾವುದೇ ರಾಜಕೀಯ ವಿಚಾರವನ್ನು ನಾವು ಚರ್ಚೆ ಮಾಡಿಲ್ಲ. ಇದೊಂದು ವೈಯಕ್ತಿಕ ಮತ್ತು ಸೌರ್ಜನ್ಯದ ಭೇಟಿ ಅಷ್ಟೇ ಆಗಿತ್ತು' ಎಂದು ಸ್ಪಷ್ಟಪಡಿಸಿದರು.
ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರ ಕಾಲದಿಂದಲೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ನಡುವೆ ಬಾಂಧವ್ಯವಿದೆ. ವೈಯಕ್ತಿಕ ಗೆಳತನ ಬೇರೆ, ರಾಜಕೀಯವೇ ಬೇರೆ. ಕೆಲ ವಿಚಾರಗಳನ್ನು ಚರ್ಚೆ ಮಾಡಲು ಅವರನ್ನು ತಾನು ಭೇಟಿ ಮಾಡಿದ್ದೆ ಎಂದು ಕುಮಾರಸ್ವಾಮಿ ವಿವರಣೆ ನೀಡಿದರು.