ಖಾತೆ ಬದಲಾವಣೆಯಿಂದ ಬೇಸರ: ಡಾ.ಸುಧಾಕರ್ ನಿವಾಸದಲ್ಲಿ ಸಚಿವರ ಸಭೆ ?
ಬೆಂಗಳೂರು, ಜ.21: ಖಾತೆಗಳ ಹಂಚಿಕೆ ಹಾಗೂ ಅದಲು, ಬದಲು ಮಾಡಿರುವುದರಿಂದ ಬೇಸರಗೊಂಡಿರುವ ಸಚಿವರಾದ ಎಂಟಿಬಿ ನಾಗರಾಜ್, ಕೆ.ಗೋಪಾಲಯ್ಯ, ಸದಾಶಿವನಗರ ದಲ್ಲಿರುವ ಡಾ.ಕೆ.ಸುಧಾಕರ್ ನಿವಾಸದಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅಬಕಾರಿ ಖಾತೆ ನೀಡಿರುವುದಕ್ಕೆ ಎಂಟಿಬಿ ನಾಗರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಹಿಂಪಡೆದಿರುವುದಕ್ಕೆ ಗೋಪಾಲಯ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಹಿಂಪಡೆದಿರುವುದಕ್ಕೆ ಡಾ.ಕೆ.ಸುಧಾಕರ್ ಬೇಸರಗೊಂಡಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೆಜ್ಜೆಗಳನ್ನಿಡಬೇಕು ಎಂಬುದರ ಬಗ್ಗೆ ಇವರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಮತ್ತೊಬ್ಬ ಸಚಿವ ಡಾ.ನಾರಾಯಣ, ತೋಟಗಾರಿಕೆ, ಪೌರಾಡಳಿತ ಹಾಗೂ ರೇಶ್ಮೆ ಇಲಾಖೆಯನ್ನು ಹಿಂಪಡೆದು, ಯುವಜನ ಸೇವಾ, ಕ್ರೀಡೆ ಮತ್ತು ಹಜ್, ವಕ್ಫ್ ಇಲಾಖೆಯ ಜವಾಬ್ದಾರಿ ವಹಿಸಿರುವುದಕ್ಕೆ ಬೇಸರಗೊಂಡಿದ್ದು, ಸಚಿವ ಸುಧಾಕರ್ ಗೆ ಕರೆ ಮಾಡಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
Next Story