ಬಿಜೆಪಿ ಸರಕಾರವನ್ನು ಟೀಕಿಸಿದ್ದಕ್ಕೆ ಹಿರಿಯ ಸಾಹಿತಿ ಹಂಪನಾ ವಿಚಾರಣೆ: ಸಾಹಿತಿಗಳು, ಚಿಂತಕರು, ಗಣ್ಯರಿಂದ ಖಂಡನೆ
ಬೆಂಗಳೂರು, ಜ. 22: ಕೇಂದ್ರದ ಬಿಜೆಪಿ ಸರಕಾರವನ್ನು ಟೀಕಿಸಿದ ಆರೋಪದ ಮೇಲೆ ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಮಂಡ್ಯ ನಗರದ ಪಶ್ಚಿಮ ಠಾಣಾ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಕ್ಕೆ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ರಾಜಕೀಯ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ಮಂಡ್ಯ ನಗರದಲ್ಲಿ ಜ.17ರಂದು ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಮಾತನಾಡಿದ ಹಂ.ಪ.ನಾಗರಾಜಯ್ಯ, ‘ಕೇಂದ್ರ ಸರಕಾರವನ್ನು ದುರ್ಯೋಧನ, ಗೋಮುಖ ವ್ಯಾಘ್ರಕ್ಕೆ ಹೋಲಿಕೆ ಮಾಡಿ' ಟೀಕಿಸಿದ್ದರು. ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆ ಹಿನ್ನೆಲೆಯಲ್ಲಿ ಪೊಲೀಸರು ನಾಗರಾಜಯ್ಯ ಅವರನ್ನು ಕಾರ್ಯಕ್ರಮದ ಬಳಿಕ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ದೂರುದಾರರು ನಾಗರಾಜಯ್ಯ ಅವರ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ನಾಗರಾಜಯ್ಯ ಅವರ ಹೇಳಿಕೆ ಪಡೆದು ಪೊಲೀಸರು ವಾಪಸ್ ಕಳುಹಿಸಿದ್ದರು ಎಂದು ಗೊತ್ತಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ: ‘ಕೇಂದ್ರ ಸರಕಾರವನ್ನು ಟೀಕಿಸಿದ್ದನ್ನು ವಿರೋಧಿಸಿ ಕೆಲವರು ದೂರು ನೀಡಿದ್ದನ್ನೆ ನೆಪವಾಗಿಟ್ಟುಕೊಂಡು 85 ವರ್ಷದ ಹಿರಿಯ ಸಾಹಿತಿ ಹಂಪನಾ ಅವರನ್ನು ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದು, ಆಘಾತಕಾರಿ ಬೆಳವಣಿಗೆಯಾಗಿದೆ' ಎಂದು ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ಸಾಹಿತಿಗಳು ಟೀಕಿಸಿದ್ದಾರೆ.
ಹಂ.ಪ.ನಾ ಅವರಿಗೆ ನೈತಿಕ ಬೆಂಬಲ ಘೋಷಿಸಿರುವ ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡ, ಎ.ಜೆ.ಸದಾಶಿವ, ನಾಗಮೋಹನದಾಸ್, ಹಿರಿಯ ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ಸಿದ್ಧನಗೌಡ ಪಾಟೀಲ್, ಡಾ.ಜಿ.ರಾಮಕೃಷ್ಣ, ಬಸವರಾಜ ಸಬರದ, ಅಲ್ಲಮಪ್ರಭು ಬೆಟ್ಟದೂರು, ಸುಕನ್ಯಾ ಮಾರುತಿ, ಕೆ.ಶರೀಫಾ, ಭಕ್ತರಹಳ್ಳಿ ಕಾಮರಾಜ್, ಗುರುಶಾಂತ್, ಬಿ. ರಾಜಶೇಖರಮೂರ್ತಿ, ಎಚ್.ಆರ್.ಸ್ವಾಮಿ, ಗುಡಿಹಳ್ಳಿ ನಾಗರಾಜ್ ಸೇರಿದಂತೆ ಹಲವರು ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
‘ಪ್ರಧಾನಿ ಮೋದಿ ಸೇರಿದಂತೆ ಯಾವುದೇ ನೇತಾರರು ಹಾಗೂ ಸರಕಾರವನ್ನು ಮೆಚ್ಚುವ ಸ್ವಾತಂತ್ರ್ಯ ಇರುವಂತೆ ಟೀಕಿಸುವ, ವಿಮರ್ಶಿಸುವ ಸ್ವಾತಂತ್ರ್ಯವೂ ಇದೆ. ದೇಶದಲ್ಲಿ ರೈತರು ನಡೆಸುತ್ತಿರುವ ಚಳವಳಿಗೆ ಸ್ಪಂದಿಸಿ, ಕೇಂದ್ರ ಸರಕಾರವನ್ನು ಪ್ರಶ್ನಸಿದ್ದಾರೆ. ಅದು ಇಷ್ಟವಾಗದವರು ಪ್ರತ್ಯುತ್ತರ ನೀಡಬಹುದಾಗಿತ್ತು. ಆದರೆ, ಪೊಲೀಸ್ ಠಾಣೆಗೆ ಕರೆಸಿಕೊಳ್ಳುವಂತೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಈ ಅನುಚಿತ ವರ್ತನೆ ಸರಿಯಲ್ಲ' ಎಂದು ಮೇಲ್ಕಂಡ ಗಣ್ಯರು ಪ್ರಕಟಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ನಾಡೋಜ ಹಂಪನಾ ಅವರನ್ನು ಮಂಡ್ಯ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆಸಿದ್ದು ಅತ್ಯಂತ ಖಂಡನಾರ್ಹ. ಈ ಸರಕಾರವನ್ನು ಯಾರೂ ಟೀಕಿಸಬಾರದೇ? ಯಾರೂ ಪ್ರಶ್ನಿಸಬಾರದೇ? ನಮ್ಮ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಇದೆಯೇ? ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ'
-ಆರ್.ಪೂರ್ಣಿಮಾ, ಹಿರಿಯ ಪತ್ರಕರ್ತರು
‘ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದು ಕೇವಲ ನಿಘಂಟಿನಲ್ಲಿರುವ ಪದವೇ? ದಯಮಾಡಿ ಇದನ್ನು ಎಲ್ಲ ಲೇಖಕರೂ ಖಂಡಿಸಬೇಕು. ಸಾಧ್ಯವಾದರೆ ಪ್ರತಿಭಟನೆಯನ್ನೂ ಮಾಡಬೇಕು. ಅದೇ ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡುತಿರುತ್ತಾರೆ. ಅವರಿಗೆ ಈ ಕಾನೂನು ಅನ್ವಯಿಸುವುದಿಲ್ಲವೇ?'
-ರವೀಂದ್ರನಾಥ ಸಿರಿವರ ಪ್ರಕಾಶಕ, ಚಿತ್ರನಿರ್ದೇಶಕ
‘ಈ ವಿಚಾರದಲ್ಲಿ ಹಂಪನಾ ಅವರನ್ನು ಪೊಲಿಸ್ ಸ್ಟೇಷನ್ಗೆ ಕರೆಸಿದ್ದು ಪ್ರತಿಭಟನಾರ್ಹ. ಸರಕಾರವನ್ನು ಗೋಮುಖವ್ಯಾಘ್ರ, ದುರ್ಯೋಧನ ಇತ್ಯಾದಿ ಪದಗಳಿಂದ ಟೀಕಿಸುವವರೂ ಅವರಲ್ಲ. ಇದು ಅವರ ಮೇಲೆ ಹೊರಿಸಿದ ಆರೋಪವೆಂದೇ ತಿಳಿಯುವೆ'
-ನಾ.ದಾಮೋದರ ಶೆಟ್ಟಿ, ಹಿರಿಯ ಸಾಹಿತಿ
‘ಹೃದಯ ಮಿದುಳು ಇಲ್ಲದ ಸರಕಾರ ನಾಡಿನ ವಿದ್ವಾಂಸರನ್ನೂ ಪೊಲೀಸ್ ಠಾಣೆಗೆ ಕರೆಸುವ ಹೀನಕೃತ್ಯಕ್ಕೆ ಇಳಿದಿದೆ. ಹಂಪನಾ ಅವರು ರೈತ ವಿರೋಧಿ ನಿಲುವನ್ನು ಟೀಕಿಸಿದ್ದು ಘೋರ ಅಪರಾಧ! ಇಂತಹ ಸರ್ವಾಧಿಕಾರಿ ಸರಕಾರದ ನೀತಿಗೆ ಧಿಕ್ಕಾರ. ಅತ್ಯಂತ ಖಂಡನಾರ್ಹ ಘಟನೆ'
-ಅಬ್ಬೂರು ರಾಜಶೇಖರ, ಹಿರಿಯ ಪತ್ರಕರ್ತರು
‘ಹಂಪನಾ ಸಾರ್, ನಿಮ್ಮ ಪರ ನಾವಿದ್ದೇವೆ. ರೈತರ ಪರ ದನಿ ಎತ್ತಿ, ಪ್ರಧಾನಿಯವರ ನಿಷ್ಕ್ರಿಯತೆ ಬಗ್ಗೆ ಪ್ರಶ್ನಿಸಿದ ನಿಮ್ಮನ್ನೆ ತಪ್ಪಿತಸ್ಥರನ್ನಾಗಿಸ ಹೊರಟ ವ್ಯವಸ್ಥೆಗೆ ನನ್ನ ಧಿಕ್ಕಾರ. ಸತ್ಯ ಹೇಳಿದ್ದೀರಿ. ಎಲ್ಲೆಡೆಯೂ ಸತ್ಯಕ್ಕೆ ಮನ್ನಣೆ ನಿಧಾನವಾಗೆ ಲಭಿಸುತ್ತದೆ. ನಿಮ್ಮ ಅಭಿಪ್ರಾಯ ಸ್ವಾಗತಿಸುವ ಬಹು ದೊಡ್ಡ ವರ್ಗವೇ ಇದೆ. ಆತಂಕಪಡಬೇಡಿ. ಸತ್ಯ ಕಹಿ ಮತ್ತು ಕಟು. ಈ ದೇಶ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ನಿಮ್ಮನ್ನು ಪೊಲೀಸ್ ಠಾಣೆಗೆ ಕರೆಸಿದ್ದೇ ಉದಾಹರಣೆ. ಇದು ನೋವಿನ ಸಂಗತಿ. ‘ಏಕ ವ್ಯಕ್ತಿಯ ವಿಜೃಂಭಣೆ ಗುಲಾಮಗಿರಿಯ ಸಂಕೇತ' ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುವ ಮೋದಿ ಸರಕಾರಕ್ಕೆ ಅವರ ಹಿಂಬಾಲಕರಿಗೆ ಮತ್ತೊಮ್ಮೆ ನಮ್ಮ ಧಿಕ್ಕಾರ ಇದೆ. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯು ನಿಮ್ಮ ಬೆಂಬಲಕ್ಕಿರಲಿದೆ'
-ಆರ್.ಜಿ.ಹಳ್ಳಿ ನಾಗರಾಜ, ಲೇಖಕ
‘ಸರಕಾರದ ಹಲವು ಹತ್ತು ಸಂಸ್ಥೆಗಳಿಗೆ ತಮ್ಮ ಸೇವೆಯನ್ನು ಒದಗಿಸಿರುವ ಹಿರಿಯ ವಿದ್ವಾಂಸ ಪ್ರೊ.ಹಂಪನಾ ಅವರನ್ನು ಅನಾಮಿಕರ ದೂರಿನ ಆಧಾರದಲ್ಲಿ ಪೊಲೀಸ್ ಠಾಣೆಗೆ ಕರೆಸಿ ವಿಚಾರಿಸಿದ್ದು ಅಘಾತಕಾರಿ. ಪ್ರಜಾಪ್ರಭುತ್ವದಲ್ಲಿ ಟೀಕೆ ವಿಮರ್ಶೆಗಳು ಸದಾ ಇರುತ್ತವೆ. ಇದನ್ನು ಪೊಲೀಸರ ನಿರ್ವಹಣೆಗೆ ಬಿಡಲು ಸರಕಾರ ಮುಂದಾಗಿದೆಯೇ. ಇದನ್ನು ನಾನು ಖಂಡಿಸುತ್ತೇನೆ. ಸಂಬಂಧಪಟ್ಟವರು ಪ್ರೊ.ಹಂಪನಾ ಅವರ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ. ನೀವೂ ದನಿಗೂಡಿಸಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡೋಣ'
-ಡಾ.ಬಂಜಗೆರೆ ಜಯಪ್ರಕಾಶ್, ಸಂಸ್ಕೃತಿ ಚಿಂತಕ
‘ಯಾವುದೇ ಜನಪರವಾದ ಸರಕಾರ ಜನರ ಆಗ್ರಹಗಳನ್ನು ಮುಕ್ತಮನಸಿನಿಂದ ಆಲಿಸಬೇಕು. ಸಾಹಿತಿಗಳು ಮೊದಲಿನಿಂದಲೂ ಸರಕಾರ, ಸಮಾಜವನ್ನು ಎಚ್ಚರಿಸುವ ಮಾತುಗಳನ್ನಾಡುತ್ತ ಬಂದಿದ್ದಾರೆ. ಇಂಥ ಧ್ವನಿಗಳನ್ನು ಹತ್ತಿಕ್ಕುವುದೆಂದರೆ ಪ್ರಜಾಪ್ರಭುತ್ವ, ಸಂವಿಧಾನವನ್ನು ನಾಶಪಡಿಸುವುದು ಎಂದರ್ಥ. ಸರಕಾರ ನಡೆಸುವವರಿಗೆ ಈ ವಿವೇಕ ಇರಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪೊಲೀಸರು ಮಾಡಿರುವ ದುಷ್ಕೃತ್ಯಕ್ಕಾಗಿ ಕೂಡಲೇ ಹಂಪನಾ ಅವರಲ್ಲಿ ಕ್ಷಮೆ ಯಾಚಿಸಬೇಕು. ಈ ರೀತಿಯ ಸುಳ್ಳು ಕೇಸುಗಳನ್ನು ದಾಖಲಿಸಿಕೊಳ್ಳುವ ದಾಷ್ಟ್ರ್ಯ ಪ್ರದರ್ಶಿಸುತ್ತಿರುವ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಬೇಕು. ಈ ಘಟನೆಗೆ ಕಾರಣಕರ್ತರನ್ನು ಕೂಡಲೇ ಅಮಾನತು ಮಾಡಬೇಕು'
-ಟಿ.ಎ.ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ
‘ನಮ್ಮ ನಡುವಿನ ಹಿರಿಯ ಲೇಖಕ ಹಂ.ಪ.ನಾಗರಾಜಯ್ಯನವರು ರೈತರನ್ನು ಬೆಂಬಲಿಸಿ ಮಾತನಾಡಿದಕ್ಕೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ! ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಇದು ಈ ನಾಡಿನ ವಾಕ್ ಸ್ವಾತಂತ್ರ್ಯದ ವೈಖರಿ! ಸಾಹಿತಿ ಕಲಾವಿದರು ಮಾತಾಡುವುದಿಲ್ಲ ಎಂದು ಟೀಕಿಸುವವರು ಒಬ್ಬರಾದರೂ ಇದರ ವಿರುದ್ಧ ಸೊಲ್ಲೆತ್ತಿಲ್ಲ. ನಮಗೇನಾಗಿದೆ? ಇಂಥ ದುಷ್ಟ ಮನಸ್ಥಿತಿಯನ್ನು ವಿರೋಧಿಸದೆ ಬೆಚ್ಚಗಿರುವಷ್ಟು ತಣ್ಣಗಾಗಿದೆಯೇ ನಮ್ಮ ಚಿಂತನೆಯ ಕ್ರಮಗಳು? ಲೋಕದ ನಡೆ, ಪ್ರಜ್ಞಾವಂತರ ಮೌನ ನಮ್ಮ ವಿರೋಧಿಗಳಿಗಿಂತ ಹೆಚ್ಚು ಅಪಾಯಕಾರಿ ಅನ್ನಿಸುತ್ತಿದೆ!!'
-ಡಾ.ವಿಜಯಾ, ಹಿರಿಯ ಪತ್ರಕರ್ತೆ, ಲೇಖಕಿ
‘ಮಂಡ್ಯ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ರೈತರ ಪರ ದನಿ ಎತ್ತಿ, ರೈತರ ಬಗ್ಗೆ ಕಾಳಜಿ, ಆಸಕ್ತಿ ತೋರದ ಪ್ರಧಾನಿ ಬಗ್ಗೆ ಹಿರಿಯ ವಿದ್ವಾಂಸ ಹಂಪನಾ ಅವರು ಟೀಕಿಸಿದರು ಎಂಬ ಕಾರಣ ಮುಂದೊಡ್ಡಿ, ಅವರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿ, ಮಾನಸಿಕ ಹಿಂಸೆ ನೀಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆ ಎಂದೇ ಭಾವಿಸಬೇಕಾಗುತ್ತದೆ. ಸರಕಾರದ ಹಾಗೂ ಪೊಲೀಸರ ಈ ಕ್ರಮ ಆತಂಕಕಾರಿ. ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕನ್ನಡದ ಶ್ರೇಷ್ಠ ಸಂಶೋಧಕರೊಬ್ಬರಿಗೆ ಆದ ಅವಮಾನವನ್ನು ನಾನು ಖಂಡಿಸುತ್ತೇನೆ'
-ಶೇಖರಗೌಡ ಮಾಲಿಪಾಟೀಲ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪ, ಕೊಪ್ಪಳ
‘ಹಿರಿಯ ಸಾಹಿತಿ ಹಂಪನಾ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು ಬೇಸರದ ವಿಷಯ. ಸರಕಾರವು ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಟೀಕಿಸುವವರನ್ನು ಬೆದರಿಸುವ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಕ್ರಿಯೆ'
-ರಾಘವೇಂದ್ರ ಪಾಟೀಲ, ಹಿರಿಯ ಸಾಹಿತಿ
‘ಹಂಪನಾ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಿಸಿದ ಪ್ರಕರಣವನ್ನು ಒಂಟಿಯಾಗಿ ನೋಡಲಾಗದು. ಅನಂತಮೂರ್ತಿಯವರಿಗೆ ಪಾಕಿಸ್ತಾನಕ್ಕೆ ಟಿಕೆಟ್ ಬುಕ್ ಮಾಡಿದ್ದು, ಎಂ.ಎಂ.ಕಲಬುರ್ಗಿ, ಗೌರಿ ಹತ್ಯೆ, ನಾಟಕದ ಸಂಭಾಷಣೆಯೊಂದಕ್ಕಾಗಿ ಶಾಲೆಯ ಮೇಲೆ ದೇಶದ್ರೋಹದ ಪ್ರಕರಣಗಳಿಂದ ಹಿಡಿದು ಹಂಪನಾ ಪ್ರಕರಣದ ತನಕ ಸರಣಿ ವಿದ್ಯಮಾನಗಳಿವೆ. ತಿನ್ನುವ, ಉಡುವ, ಪ್ರೇಮಿಸುವ, ಬರೆವ, ಪಶುಸಾಕುವ, ಮಾರುವ ಮಾತಾಡುವ ಅನೇಕ ಬಗೆಯ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತಿರುವ ಚಿಂತನೆ ಮತ್ತು ರಾಜಕೀಯ ವ್ಯವಸ್ಥೆಯ ಭಾಗವಾಗಿ ಇವನ್ನು ಗಮನಿಸಬೇಕು. ಕರ್ನಾಟಕವು ನಾಗರಿಕ ಸ್ವಾತಂತ್ರ್ಯ ಕಸಿಯುವ ರಾಜ್ಯವಾಗುತ್ತಿರುವುದು ದಿಟ. ಕೌಶಲ್ಯ ನಾವೀನ್ಯತೆ ವಿಷಯದಲ್ಲಿ ದೇಶಕ್ಕೆ ಪ್ರಥಮಸ್ಥಾನ ಪಡೆಯಬಲ್ಲ ಕರ್ನಾಟಕಕ್ಕೆ ಇಂತಹ ವಿದ್ಯಮಾನಗಳು ಘಾತಕವಾದವು'
-ಡಾ.ರಹಮತ್ ತರೀಕೆರೆ, ಲೇಖಕರು, ಚಿಂತಕರು