ಅನುಮಾನಗಳ ಸುಳಿಯಲ್ಲಿ ಹುಣಸೋಡು ದುರಂತ: ಶಿವಮೊಗ್ಗಕ್ಕೆ ತಪಾಸಣೆ ಇಲ್ಲದೆ ಸ್ಫೋಟಕ ಸಾಗಣೆ ?
ಇಲ್ಲಿ ಬೀಡಿ, ಗುಟ್ಕಾದಷ್ಟೇ ಸಲೀಸಾಗಿ ಮಾರಾಟವಾಗುತ್ತೆ ಸ್ಫೋಟಕ !
ಶಿವಮೊಗ್ಗ, ಜ.23: ಇಡೀ ದೇಶದ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲೆಯ ಹುಣಸೋಡು ಕಲ್ಲು ಕ್ವಾರೆಯಲ್ಲಿ ಉಂಟಾದ ಸ್ಫೋಟ ಪ್ರಕರಣ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸ್ಫೋಟಗೊಂಡ ಸ್ಥಳದಿಂದ 100 ಕಿ.ಮೀ. ದೂರದವರೆಗೂ ಕಂಪನ ದಾಖಲಾಗಿದ್ದು, ಸ್ಫೋಟಗೊಂಡ ವಸ್ತು ಯಾವುದು ಎಂದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಜಿಲೆಟಿನ್ಗಿಂತಲೂ ಸುಧಾರಿತ, ಹೆಚ್ಚು ಶಕ್ತಿಯುಂಟು ಮಾಡುವ ಜೆಲ್ ಮಾದರಿಯ ಬೂಸ್ಟರ್ಗಳನ್ನು ಬಳಸಿರಬಹುದು ಎಂಬ ಅನುಮಾನಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿವೆ. ಆದರೆ ಜಿಲ್ಲಾಡಳಿತ ಈವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.
ಜಿಲೆಟಿನ್, ಡಿಟೋನೇಟರ್ಗಿಂತಲೂ ಸುಧಾರಿತ ಬೂಸ್ಟರ್ಗಳು ಹೆಚ್ಚು ಪರಿಣಾಮಕಾರಿ ಹಾಗೂ ಶಕ್ತಿಶಾಲಿಯಾಗಿದ್ದು, ಕಡಿಮೆ ಶಕ್ತಿಯಿಂದಲೂ ಹೊತ್ತಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದೇ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಲಾರಿಗಿಲ್ಲ ತಪಾಸಣೆ: ಕಲ್ಲು ಗಣಿಗಾರಿಕೆಗೆ ಅಧಿಕೃತ ಮಾನ್ಯತೆ ಇದೆಯಾದರೂ ಜಿಲೆಟಿನ್ ಕಡ್ಡಿಗಳು ಮತ್ತು ಇತರ ಸ್ಫೋಟಕ ಸಾಮಗ್ರಿಗಳನ್ನು ಬಳಕೆ ಮಾಡಲು ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾಧಿಕಾರಿ ಕಚೇರಿ ಸೇರಿ 9 ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು. ಆದರೆ, ಯಾವ ಅನುಮತಿಯೂ ಇಲ್ಲದೆ ಸ್ಫೋಟಕ ತುಂಬಿದ್ದ ಲಾರಿ ಶಿವಮೊಗ್ಗಕ್ಕೆ ಪ್ರವೇಶ ಮಾಡಿರುವುದು ಯಕ್ಷ ಪ್ರಶ್ನೆಯಾಗಿದೆ.
ಭದ್ರತಾ ವೈಫಲ್ಯ: ಭಾರೀ ಪ್ರಮಾಣದಲ್ಲಿ ಸ್ಫೋಟಕ ತುಂಬಿದ್ದ ಲಾರಿ ರಾಜ್ಯ ಸೇರಿದಂತೆ ಜಿಲ್ಲೆಯ 14-15 ಚೆಕ್ ಪೋಸ್ಟ್ಗಳನ್ನು ದಾಟಿ ಹುಣಸೋಡು ತಲುಪಿರುವುದು ರಾಜ್ಯದ ಭದ್ರತಾ ವೈಫಲ್ಯವನ್ನು ಬಟಾಬಯಲುಗೊಳಿಸಿದೆ. ಭಾರೀ ಪ್ರಮಾಣದಲ್ಲಿ ಸ್ಫೋಟಕ ಸಂಗ್ರಹಿಸಿಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಸ್ಫೋಟಕವನ್ನು ಲಾರಿಯಲ್ಲಿ ತುಂಬಿಕೊಂಡು ಶಿವಮೊಗ್ಗಕ್ಕೆ ಬಂದಿರುವುದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಲಾರಂಭಿಸಿದೆ. ಸ್ಫೋಟಕ ರವಾನೆಯ ಬಗ್ಗೆ ರಾಜ್ಯ ಗುಪ್ತದಳ, ಜಿಲ್ಲಾ ಗುಪ್ತದಳ ಹಾಗೂ ಠಾಣಾ ಗುಪ್ತದಳಗಳಿಗೆ ಮಾಹಿತಿ ಇರಲಿಲ್ಲವೇ ಎಂಬ ಬಗ್ಗೆಯೂ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ವಿದ್ವಂಸಕ ಕೃತ್ಯಗಳು ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಕಟ್ಟುನಿಟ್ಟಾಗಿ ತಡೆಯುವ ಉದ್ದೇಶದಿಂದ ಆಂತರಿಕ ಭದ್ರತಾ ವಿಭಾಗವಿದೆ. ಈ ವಿಭಾಗಕ್ಕೂ ಈ ಸ್ಫೋಟಕ ಸಾಮಗ್ರಿ ಕೊಂಡೊಯ್ಯುತ್ತಿರುವ ಬಗ್ಗೆ ಮಾಹಿತಿ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಸ್ಥಳೀಯರ ಆರೋಪ: ಕಲ್ಲುಕ್ವಾರೆಗಳು ಇರುವ ಪ್ರದೇಶದಲ್ಲಿ ಸ್ಫೋಟಕ ತುಂಬಿಕೊಂಡು ಲಾರಿಗಳು ಹೋಗುವುದು ಇದೇ ಮೊದಲೇನಲ್ಲ ಎಂದು ಹುಣಸೋಡಿನ ಸ್ಥಳೀಯರು ಆರೋಪಿಸಿದ್ದಾರೆ. ಪ್ರತಿ 15-20 ದಿನಕ್ಕೊಮ್ಮೆ ಇಲ್ಲಿ ದೊಡ್ಡ ಲಾರಿಗಳು ಸ್ಫೋಟಕ ತುಂಬಿಕೊಂಡು ಬರುತ್ತವೆ. ಇದು ಇಲ್ಲಿ ಸಾಮಾನ್ಯವಾಗಿದೆ. ಇಲ್ಲಿ ಜಿಲೆಟಿನ್ ಕಡ್ಡಿ, ಡಿಟೋನೇಟರ್ ಮತ್ತಿತರ ಸ್ಫೋಟಕ ಸಾಮಗ್ರಿಗಳು ಬೀಡಿ, ಗುಟ್ಕಾದಷ್ಟೇ ಸಲೀಸಾಗಿ ಮಾರಾಟವಾಗುತ್ತವೆ ಎಂದು ಆರೋಪಿಸಿದ್ದಾರೆ.
ಕ್ವಾರೆ ಮಾಲಕರಿಗಿಲ್ಲ ಗಣಿ ಸ್ಫೋಟಗೊಳಿಸುವ ಅನುಮತಿ
ಶಿವಮೊಗ್ಗದಲ್ಲಿ ಕಲ್ಲುಗಣಿಯನ್ನು ಸ್ಫೋಟಿಸುವ ಅನುಮತಿ ಕ್ವಾರೆ ಮಾಲಕರಿಗಿಲ್ಲ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಶಿವಮೊಗ್ಗದಲ್ಲಿರುವ ಯಾವುದೇ ಕ್ವಾರೆಗೂ ಕಲ್ಲುಗಣಿಯನ್ನು ಸ್ಫೋಟಿಸಲು ಅನುಮತಿ ನೀಡಲಾಗಿಲ್ಲ. ಆದರೂ, ಇಲ್ಲಿ ಗಣಿ ಸ್ಫೋಟಿಸುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ.
ಎಲ್ಲೆಲ್ಲಿವೆ ಅಕ್ರಮ ಕ್ವಾರೆಗಳು
ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ 35ಕ್ಕೂ ಹೆಚ್ಚಿನ ಕಲ್ಲು ಕ್ವಾರೆ ಮತ್ತು ಕ್ರಷರ್ ಗಳಿವೆ. ಆದರೆ, ಈ ಪ್ರದೇಶಗಳಲ್ಲಿ ಗಣಿ ಸ್ಫೋಟಕ್ಕೆ ಅವಕಾಶ ಇಲ್ಲ. ಗೆಜ್ಜೆನಹಳ್ಳಿ, ಹುಣಸೋಡು, ದೇವಕಾತಿಕೊಪ್ಪ, ಜಕಾತಿಕೊಪ್ಪ, ಕೋಟೆಗಂಗೂರು, ಕಲ್ಲುಗಂಗೂರು ಗ್ರಾಮಗಳ ಸುತ್ತಮುತ್ತಲು ಅಕ್ರಮ ಕಲ್ಲು ಗಣಿಗಾರಿಕೆಯ ಕೇಂದ್ರಗಳಿವೆ. ಇಲ್ಲಿ ಕಾನೂನು ಬದ್ಧ ಕೆಲವು ಕ್ವಾರೆಗಳಿದ್ದರೆ, ಕಾನೂನು ಬಾಹಿರ ಕ್ವಾರೆಗಳೇ ಹೆಚ್ಚಾಗಿವೆ ಎಂದು ಸಾರ್ವಜನಿಕರೇ ಹೇಳುತ್ತಾರೆ.
ತಿಂಗಳಿಗೆ ಜಿಲ್ಲೆ ಪ್ರವೇಶಿಸುತ್ತೆ 5 ಲಾರಿ ಲೋಡ್ ಸ್ಫೋಟಕ ?
ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಪ್ರದೇಶವೊಂದರಲ್ಲೇ ಹಗಲು ರಾತ್ರಿ ಬಂಡೆಗಳನ್ನು ಸ್ಫೋಟಿಸಲು ಬಂಡೆಗಳಿಗೆ ಪ್ರತಿ ತಿಂಗಳು ಅಂದಾಜು ಐದು ಲಾರಿ ಲೋಡ್ಗೂ ಅಧಿಕ ಸ್ಫೋಟಕಗಳು ಬೇಕಿವೆ ಎನ್ನಲಾಗಿದೆ. ಕೆಲವರು ಕೊಡಗಿನ ಕುಶಾಲನಗರದಿಂದ ಜಿಲೆಟಿನ್ ಮತ್ತು ಅಮೋನಿಯಮ್ ತರಿಸಿಕೊಂಡರೆ, ಮತ್ತೆ ಕೆಲವರು ಬಳ್ಳಾರಿಯಿಂದ ಸ್ಫೋಟಕ ತರಿಸಿಕೊಳ್ಳುತ್ತಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.
ಹುಣಸೋಡು ದುರಂತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯ ಕಾರಣ ?
ಹುಣಸೋಡಿನಲ್ಲಿ ನಡೆದ ಸ್ಫೋಟಕ್ಕೆ ಲಾರಿ ಚಾಲಕನ ನಿರ್ಲಕ್ಷ ಕಾರಣ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಗುರುವಾರ ರಾತ್ರಿ 10:20ರ ವೇಳೆಗೆ ಕ್ವಾರೆಗೆ ಬಂದಿದ್ದ ಲಾರಿಯನ್ನು ನಿಲುಗಡೆಗೊಳಿಸುವ ಸಂದರ್ಭದಲ್ಲಿ ಲಾರಿ ಹಿಂದೆ ಚಲಿಸಿದೆ. ಈ ವೇಳೆ ಲಾರಿ ಅಲ್ಲೇ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಅಣತಿ ದೂರದಲ್ಲಿದ್ದ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡಿದೆ. ಬಳಿಕ ವಿದ್ಯುತ್ ತಂತಿ ಸ್ಫೋಟಕವಿದ್ದ ಲಾರಿಯ ಮೇಲೆ ಬಿದ್ದ ಪರಿಣಾಮ ಸ್ಫೋಟ ಸಂಭವಿಸಿದೆ ಎಂದು ಘಟನಾ ಸ್ಥಳ ಪರಿಶೀಲಿಸಿದ್ದ ಸ್ಫೋಟಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.