ಹುಣಸೋಡು ಕ್ರಷರ್ನಲ್ಲಿ ಸ್ಫೋಟ ಪ್ರಕರಣ: ನಾಲ್ವರ ಬಂಧನ
ಶಿವಮೊಗ್ಗ, ಜ.25: ಹುಣಸೋಡು ಕ್ರಷರ್ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೂರ್ವ ವಲಯದ ಐಜಿಪಿ ಎಸ್.ರವಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರವೀಂದ್ರನಗರದ ಬಿ.ವಿ.ಸುಧಾಕರ್(57), ವಿನೋಬನಗರದ ನರಸಿಂಹ (39), ಚಾಲುಕ್ಯ ನಗರದ ಮುಮ್ತಾಜ್ ಅಹ್ಮದ್ (50), ಭದ್ರಾವತಿಯ ಜಂಬರಘಟ್ಟದ ರಶೀದ್ (44) ಎಂಬುವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆಂಧ್ರಪ್ರದೇಶದಿಂದ ಶಿವಮೊಗ್ಗಕ್ಕೆ ಯಾವ ರೀತಿಯಲ್ಲಿ ಜಿಲೆಟಿನ್ಗಳನ್ನು ಸಾಗಿಸಲಾಗಿದೆ, ಅದಕ್ಕೆ ಯಾರು ಬೆಂಬಲಿಸಿದ್ದಾರೆ ಇತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮಾಡಲಾಗುತ್ತಿದೆ. ಇದಕ್ಕಾಗಿ ಆಂಧ್ರ ಪೊಲೀಸರ ಸಹಕಾರ ಪಡೆಯಲಾಗುತ್ತಿದೆ. ಅಲ್ಲಿನ ಡಿಐಜಿಗಳು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ ಎಂದರು.
ಮೃತಪಟ್ಟಿರುವ ಭದ್ರಾವತಿ ತಾಲೂಕಿನ ಅಂತರಗಂಗೆಯ ಪ್ರವೀಣ್ ಜಿಲೆಟಿನ್ಗಳನ್ನು ಸರಬರಾಜು ಮಾಡುವಲ್ಲಿ ಮಧ್ಯವರ್ತಿಯಿಂದ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆತನೊಂದಿಗೆ ಇರುತ್ತಿದ್ದ ಪುನೀತ್ ಎಂಬಾತ ಕಾಣೆಯಾಗಿದ್ದು, ಬಹುಶಃ ಸ್ಥಳದಲ್ಲಿ ಸಿಕ್ಕಿರುವ ಶವ ಅವನದ್ದೇ ಇರಬಹುದಾ ಎಂಬ ಶಂಕೆ ಇದೆ. ಆದರೆ, ಅದು ಆತನದ್ದೇ ಎಂದು ಇದುವರೆಗೆ ಖಾತರಿಯಾಗಿಲ್ಲ. ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂದರು.
ಮಂಗಳೂರು ಮತ್ತು ಬೆಂಗಳೂರಿನ ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ದಳ ಸೇರಿದಂತೆ ಈ ಕ್ಷೇತ್ರದಲ್ಲಿ ಪರಿಣಿತರಾಗಿರುವ ತಜ್ಞರ ಸಹಕಾರ ಕೂಡ ಪಡೆಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಪಿ ಕೆ.ಎಂ.ಶಾಂತರಾಜು, ಹೆಚ್ಚುವರಿ ಎಸ್ಪಿ ಎಚ್.ಟಿ.ಶೇಖರ್ ಇತರರಿದ್ದರು.