ರಾಜ್ಯದಲ್ಲಿರುವುದು ಕಾಂಗ್ರೆಸ್- ಬಿಜೆಪಿ ಸರ್ಕಾರ: ಡಿ.ಕೆ.ಶಿವಕುಮಾರ್ ವ್ಯಂಗ್ಯ
ಮೈಸೂರು,ಜ.25: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕಾಂಗ್ರೆಸ್-ಬಿಜೆಪಿ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಸೋಮವಾರ ತಮ್ಮ ಅಳಿಯನೊಂದಿಗೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಶಾಸಕರನ್ನು ಕರೆದುಕೊಂಡು ಹೋಗಿ ಬಿಜೆಪಿಯವರು ಸರ್ಕಾರ ರಚಿಸಿದ್ದಾರೆ. ಹಾಗಾಗಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿಲ್ಲ, ಕಾಂಗ್ರೆಸ್- ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಶಾಸಕರನ್ನು ಕರೆದುಕೊಂಡು ಹೋಗಿ ಮಂತ್ರಿ ಸ್ಥಾನದ ಗಿಫ್ಟ್ ಕೊಟ್ಟಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಬಹಳ ಸುಭದ್ರವಾಗಿದೆ. ಎಲ್ಲರೂ ಅತ್ಯಂತ ಒಗ್ಗಟ್ಟಿನಿಂದ ಇದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯ ಸರ್ಕಾರ ಬಲಿಷ್ಠವಾಗಿದೆ. ಅವರಿಗೆ ಸ್ಪಷ್ಟಬಹುಮತವೂ ಇದೆ. ಅವರಲ್ಲರೂ ಒಗ್ಗಟ್ಟಾಗಿಯೇ ಇದ್ದಾರೆ. ಇವರಲ್ಲಿ ಗೊಂದಲವೇ ಇಲ್ಲ. ಇನ್ನು ಮುಖ್ಯಮಂತ್ರಿಗಳೇ ದೊಡ್ಡವರು, ಅವರ ಮಾತನ್ನು ಯಾರೂ ಸಹ ಮೀರುವುದಿಲ್ಲ ಎಂದು ವ್ಯಂಗ್ಯವಾಗಿದರು.
ನಾಳೆ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್ ರ್ಯಾಲಿ ಕುರಿತು ಮಾತನಾಡಿದ ಅವರು, ರೈತರು ನಡೆಸುವ ಟ್ರ್ಯಾಕ್ಟರ್ ರ್ಯಾಲಿಯನ್ನು ಪೊಲೀಸರು ಅಡ್ಡಿಪಡಿಸಿ ವಶಕ್ಕೆ ಪಡೆದರೆ ಅದನ್ನು ಬಿಡಿಸಿಕೊಳ್ಳಲು ನಾವು ಹೋಗುತ್ತೇವೆ. ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಿದ್ದರೂ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೆವು ಎಂದು ಹೇಳಿದರು.