ಹಣದ ಕೊರತೆಯಿಂದ ರಾಜ್ಯ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ: ಎಚ್.ಡಿ.ದೇವೇಗೌಡ
''ಮೂರನೇ ಬಾರಿಯೂ ಮಮತಾ ಸಿಎಂ ಆಗಲಿದ್ದಾರೆ''
ರಾಯಚೂರು, ಫೆ.10: ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ, ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಹಣದ ಕೊರತೆಯಿಂದಾಗಿ ಜೆಡಿಎಸ್ ಸ್ಪರ್ಧಿಸುತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಬುಧವಾರ ರಾಯಚೂರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಹಾಗೂ ಮಸ್ಕಿ, ಸಿಂದಗಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ಆದರೆ, ಹಣದ ಕೊರತೆಯಿಂದಾಗಿ ಜೆಡಿಎಸ್ ಸ್ಪರ್ಧಿಸುತ್ತಿಲ್ಲ ಎಂದು ಹೇಳಿದರು.
2023ರಲ್ಲಿ ನಡೆಯುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ತಳಮಟ್ಟದಿಂದ ಪಕ್ಷ ಸಂಘಟಿಸುವಲ್ಲಿ ನಿರತರಾಗಿದ್ದೇವೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸರಕಾರ ಮುಗಿದ ಮೇಲೆ ನಾವು ಯಾರಿಗೂ ಆರೋಪ ಮಾಡಲು ಹೋಗಿಲ್ಲ. ಪಕ್ಷ ಕಟ್ಟುವುದರಲ್ಲೇ ಸಂಪೂರ್ಣ ಭಾಗಿಯಾಗುತ್ತೇನೆ. ಅಸ್ಥಿರತೆಗೆ ನಾನು ಅವಕಾಶ ನೀಡಲ್ಲ ಎಂದರು.
ಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ. ನಮ್ಮಲ್ಲೂ 34 ಜನ ಶಾಸಕರಿದ್ದಾರೆ, ನಾವು ವಿಲೀನ ಆಗುತ್ತೇವೆ ಎನ್ನುತ್ತಾರೆ. ಕುಮಾರಸ್ವಾಮಿ ಸಿಎಂ ಆಗಬೇಕು ಅಂತಾ ಯಾರ ಮನೆಗೂ ಹೋಗಿಲ್ಲ. ಗುಲಾಂ ನಬಿ ಆಜಾದ್ ಅವರೇ ಕುಮಾರಸ್ವಾಮಿ ಸಿಎಂ ಆಗಲು ಕಾರಣ. ನನ್ನ ಮಗನಿಗೆ ಎರಡು ಮೇಜರ್ ಸರ್ಜರಿ ಆಗಿದೆ ಅಂದಿದ್ದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮಾತುಕತೆ ನಂತರ ಕುಮಾರಸ್ವಾಮಿ ಸಿಎಂ ಆಗಿದ್ರು. ಸದ್ಯ ಸಿಎಂ ಯಡಿಯೂರಪ್ಪ ಬಗ್ಗೆ ನಾನು ಯಾವುದೇ ಆರೋಪ ಮಾಡಲ್ಲ. ನನ್ನ ಶರೀರದಲ್ಲಿ ಶಕ್ತಿ ಇರೋವರೆಗೂ ಪಕ್ಷ ಕಟ್ಟುತ್ತೇನೆ ಎಂದು ದೇವೇಗೌಡ ಹೇಳಿದರು. ಅಲ್ಲದೆ ಟಿಕೆಟ್ ನೀಡುವ ವಿಚಾರದಲ್ಲಿ ನಾವು ತಪ್ಪು ಮಾಡಿದ್ದೇವೆ ಎಂದೂ ಅವರು ಹೇಳಿದರು.
ಇನ್ನು ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ, ತಮಿಳುನಾಡಿನಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಧೈರ್ಯ ಮೆಚ್ಚುವಂತಹದ್ದು. ಮತಗಳು ಕಡಿಮೆ ಬಂದರೂ ಈ ಬಾರಿ ಮಮತಾ ಮತ್ತೆ ಅಧಿಕಾರ ಪಡೆಯಬಹುದು. ಇಡೀ ಬಿಜೆಪಿ ನಾಯಕರು ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿದ್ದಾರೆ. ಸಚಿವರು, ಶಾಸಕರು ಪಕ್ಷ ಬಿಟ್ಟಿರೋದು ಸ್ವಲ್ಪ ಹಿನ್ನೆಡೆ ಆಗಬಹುದು. ಆದರೆ, ಮೂರನೇ ಬಾರಿಯೂ ಮಮತಾ ಸಿಎಂ ಆಗಲಿದ್ದಾರೆ ಎಂದು ಎಚ್.ಡಿ. ದೇವೇಗೌಡ ಭವಿಷ್ಯ ನುಡಿದರು.
ಇನ್ನು, ಗುರುವಾರ ಬೆಳಗ್ಗೆ ಹೊಸದಿಲ್ಲಿಗೆ ಹೋಗಿ ಬಜೆಟ್ ಚರ್ಚೆಯಲ್ಲಿ ಪಾಲ್ಗೊಳ್ಳುವುದಿದೆ. ದೇವದುರ್ಗದ ಗಾಣದಾಳು ಗ್ರಾಮದಲ್ಲಿ ರೈತನೊಬ್ಬ 2 ಗುಂಟೆ ಜಮೀನಿನಲ್ಲಿ ಎಚ್ಡಿಡಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಅವರ ಮನೆಗೆ ಭೇಟಿ ನೀಡುವುದಿದೆ ಎಂದರು.