ಡಿ.ಕೆ.ಶಿವಕುಮಾರ್ ಏಕೆ ಸಂಪತ್ರಾಜ್ ಪರ ಇದ್ದಾರೋ ಗೊತ್ತಿಲ್ಲ: ಅಖಂಡ ಶ್ರೀನಿವಾಸಮೂರ್ತಿ
''ಮನೆಯನ್ನು ಸುಟ್ಟವರು, ನನ್ನನ್ನು ಸುಡದೇ ಬಿಡುತ್ತಾರೆಯೇ?''
ಬೆಂಗಳೂರು, ಫೆ.12: ಡಿಜೆ-ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಿಬಿಎಂಪಿ ಮಾಜಿ ಮೇಯರ್ ಸಂಪತ್ರಾಜ್ ವಿರುದ್ಧ ಕೆಪಿಸಿಸಿ ಕ್ರಮ ಕೈಗೊಳ್ಳುವಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆಗ್ರಹಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮೇಯರ್ ಸಂಪತ್ರಾಜ್ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಸಂಪತ್ ಮೇಲೆ ಕ್ರಮಕ್ಕೆ ನಾವು ಒತ್ತಡ ತಂದಿದ್ದೇವೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷರಿಗೂ ಮನವಿ ಮಾಡಿದ್ದೇವೆ. ಆದರೂ ಅಧ್ಯಕ್ಷರು ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನೊಬ್ಬ ಶಾಸಕನಾದರೂ, ಇಂತಹ ಘಟನೆ ನಡೆದಿದೆ. ಈ ಸಂಬಂಧ ಕೃತ್ಯವೆಸಗಿದ ಎಲ್ಲರಿಗೂ ಶಿಕ್ಷೆಯಾಗಬೇಕು. ಆದರೆ, ಇವತ್ತಿಗೂ ಆಗಿಲ್ಲ ಎಂದ ಅವರು, ನ್ಯಾಯಾಲಯದ ಜಾಮೀನಿನ ಬಗ್ಗೆ ಮಾತನಾಡಲ್ಲ, ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ಡಿ.ಕೆ.ಶಿವಕುಮಾರ್ ಏಕೆ ಸಂಪತ್ರಾಜ್ ಪರ ಇದ್ದಾರೋ ಗೊತ್ತಿಲ್ಲ. ನಾನು ವಲಸೆ ಬಂದಿರಬಹುದು. ಆದರೆ ಅತಿ ಹೆಚ್ಚಿನ ಮತಗಳಿಂದ ಗೆದ್ದವನು. ಮನೆಯನ್ನೆ ಸುಟ್ಟವರು, ನನ್ನನ್ನು ಸುಡದೇ ಬಿಡುತ್ತಾರೆಯೇ? ಅಲ್ಲದೆ, ನನಗೆ ಈಗಲೂ ಬೆದರಿಕೆ ಇದೆ ಎಂದು ಹೇಳಿದರು.