ಚನ್ನರಾಯಪಟ್ಟಣ: ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಯುವಕರು ಬಲಿ
ಮೃತರಲ್ಲಿ ಓರ್ವ ಅಬಕಾರಿ ಎಸ್ಸೈ, ಮೂವರು ಐಟಿ ಉದ್ಯೋಗಿಗಳು
ಹಾಸನ, ಫೆ.13: ಕಾರೊಂದು ನಿಲ್ಲಿಸಿದ್ದ ಕಂಟೈನರ್ ಗೆ ಢಿಕ್ಕಿ ಹೊಡೆದ ಪರಿಣಾಮ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ತೆರಳುತ್ತಿದ್ದ ಅಬಕಾರಿ ಅಧಿಕಾರಿ ಸೇರಿದಂತೆ ಕಾರಿನಲ್ಲಿದ್ದ ನಾಲ್ವರು ಯುವಕರು ಮೃತಪಟ್ಟ ಘಟನೆ ಇಂದು ಮುಂಜಾನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಬೆಂಗಳೂರು ಮೂಲದ ಅಭಿಷೇಕ್, ಮಂಜುನಾಥ್, ವಿಕ್ರಂ ಹಾಗೂ ಚೇತನ್ ಎಂದು ಗುರುತಿಸಲಾಗಿದೆ. ಮೃತಪಟ್ಟವರೆಲ್ಲರೂ 25ರಿಂದ 30ರ ವಯಸ್ಸಿನೊಳಗಿನವರಾಗಿದ್ದಾರೆ.
ಮೃತರ ಪೈಕಿ ಚೇತನ್ ಅಬಕಾರಿ ಸಬ್ ಇನ್ ಸ್ಪೆಕ್ಟರ್ ಆಗಿ ಇತ್ತೀಚೆಗೆ ನೇಮಕಗೊಂಡಿದ್ದರು. ಅಭಿಷೇಕ್, ಮಂಜುನಾಥ್, ವಿಕ್ರಂ ಐಟಿ ಉದ್ಯೋಗಿಗಳಾಗಿದ್ದರು.
ಚೇತನ್ ಡ್ಯೂಟಿ ರಿಪೋರ್ಟ್ ಮಾಡಲೆಂದು ಉಳಿದ ಮೂವರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇವರು ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಕಂಟೈನರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಚನ್ನರಾಯಪಟ್ಟಣ ಸರಕಾರಿ ಶವಾಗಾರದಲ್ಲಿರಿಸಲಾಗಿದೆ.
ಈ ಬಗ್ಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಹಿನ್ನೆಲೆ ಚನ್ನರಾಯಪಟ್ಟಣ ಸರಕಾರಿ ಶವಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿದರು.