ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದೇ ಬಿಜೆಪಿಯ ಅಚ್ಛೇದಿನ್: ದಿನೇಶ್ ಗುಂಡೂರಾವ್
ಬೆಂಗಳೂರು, ಫೆ.13: ಕೇಂದ್ರ ಸರಕಾರ ಕೇವಲ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆಯಷ್ಟೆ ಏರಿಕೆ ಮಾಡುತ್ತಿಲ್ಲ. ಅಗತ್ಯ ವಸ್ತುಗಳ ಎಲ್ಲ ಬೆಲೆಗಳನ್ನೂ ಏರಿಕೆ ಮಾಡಿ ಜನತೆ ಜೀವನ ಸಾಗಿಸುವುದೇ ಕಷ್ಟಕರವಾಗುವಂತೆ ಮಾಡಿದೆ. ಬಿಜೆಪಿ ನಾಯಕರು ಹೇಳುತ್ತಿದ್ದ ಅಚ್ಛೇದಿನದ ಕಲ್ಪನೆ ಇದೇನಾ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಆತ್ಮಸಾಕ್ಷಿ ಎಂಬುದನ್ನು ಆತ್ಮಹತ್ಯೆ ಮಾಡಿಕೊಂಡಿರುವ ಬಿಜೆಪಿಯವರಿಂದ ಜನರ ಉದ್ಧಾರ ಸಾಧ್ಯವೇ. ಇವರ ದುರಾಡಳಿತದಿಂದ ಜನತೆ ಬೇಸತ್ತಿದ್ದು, ಬಿಜೆಪಿ ನಾಯಕರಿಗೆ ಹಿಡಿಶಾಪ ಹಾಕುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಯುಪಿಎ ಆಡಳಿತಾವಧಿಯಲ್ಲಿ ತೈಲ ಬೆಲೆ ಒಂದೇ ಒಂದು ಪೈಸೆ ಏರಿಕೆಯಾದರೂ ಹಾದಿ ರಂಪ-ಬೀದಿ ರಂಪ ಮಾಡುತ್ತಿದ್ದ ಬಿಜೆಪಿ ನಾಯಕರು ಈಗೇನು ಬಾಯಿಗೆ ಕಡುಬು ತುರುಕಿಕೊಂಡಿದ್ದಾರೆಯೇ? ತೈಲಬೆಲೆ ಈಗ ಶತಕದ ಸಮೀಪ ಬಂದಿದೆ. ಹಿಂದೆಲ್ಲಾ ತೈಲ ಬೆಲೆ ಏರಿಕೆಯಾದಾಗ ಉತ್ತರಕುಮಾರನ ಪೌರುಷ ತೋರಿಸುತ್ತಿದ್ದ ಬಿಜೆಪಿ ನಾಯಕರು ಈಗ ಯಾವ ಬಿಲದಲ್ಲಿ ಅಡಗಿಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.