ರಣಹದ್ದುಗಳಂತೆ ಪ್ರಜೆಗಳನ್ನು ಕಿತ್ತು ತಿನ್ನುತ್ತಿರುವ ಬಿಜೆಪಿ ಸರಕಾರಗಳು: ಕಾಂಗ್ರೆಸ್ ಟೀಕೆ
ಬೆಂಗಳೂರು, ಫೆ.13: ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳೆರಡೂ ರಣಹದ್ದುಗಳಂತೆ ಪ್ರಜೆಗಳನ್ನ ಕಿತ್ತು ತಿನ್ನುತ್ತಿವೆ. ಇಂಧನ ತೈಲಗಳ ದರ ಇಳಿಸುವುದಿಲ್ಲವೆಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಂಕೋಚವಿಲ್ಲದೆ ಹೇಳುತ್ತಾರೆ. ಇಲ್ಲಿ ಸಾರಿಗೆ ಇಲಾಖೆ ದರ ಏರಿಸಲು ಸಜ್ಜಾಗಿದೆ. ಅದಾನಿ, ಅಂಬಾನಿ ಬಿಟ್ಟು ಮಿಕ್ಕವರು ಬದುಕಲೇಬಾರದೆಂದು ಬಿಜೆಪಿ ನಿರ್ಧರಿಸಿದಂತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಬಿಜೆಪಿ ಹೇಳಲು ಸಾಧನೆಗಳಿಲ್ಲದೆ, ವೈಫಲ್ಯಗಳ ಸರಮಾಲೆಯನ್ನೆ ಹೊದ್ದಿರುವ ನೀವು ಉತ್ತರವಿಲ್ಲದಾಗ ಆಶ್ರಯಿಸುವುದೇ ‘60 ವರ್ಷ ಏನು ಮಾಡಿದ್ದಿರಿ’ ಎನ್ನುವುದನ್ನ. ನಿಮಗೆ ಸುಲಭಕ್ಕೆ ಉತ್ತರ ಸಿಗಲಿದೆ. ಕಳೆದ 6 ವರ್ಷದಿಂದ ನಿಮ್ಮ ಮೋದಿ ಮಾರಾಟಕ್ಕಿಟ್ಟಿರುವ ದೇಶದ ಆಸ್ತಿಗಳ ಪಟ್ಟಿ ತೆಗೆಯಿರಿ, ಅದೆಲ್ಲವೂ 60 ವರ್ಷದ ನಮ್ಮ ಸಾಧನೆಗಳೇ ಎಂದು ಕಾಂಗ್ರೆಸ್ ತಿಳಿಸಿದೆ.
ಪದೇ ಪದೇ ರಾಜ್ಯ ಬಿಜೆಪಿ ಪಲಾಯನವಾದಿ ಎಂದು ಸಾಬೀತು ಮಾಡುತ್ತಿದೆ. ರಾಜ್ಯದಲ್ಲಿ ಬಜೆಟ್ ಕೊರತೆ ಬಿದ್ದಿದೆ, ನೌಕರರಿಗೆ ಸಂಬಳ ನೀಡಿಲ್ಲ, ನೆರೆ ಸಂತ್ರಸ್ತರಿಗೆ ಪರಿಹಾರವಿಲ್ಲ, ವಿದ್ಯಾರ್ಥಿಗಳು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಬಿಜೆಪಿಗೆ ಪ್ರಸ್ತುತ ವಿಚಾರಗಳ ಬಗ್ಗೆ ಮಾತನಾಡುವ ಧೈರ್ಯವಿಲ್ಲದೆ, ಅಪ್ರಸ್ತುತ ವಿಷಯಗಳನ್ನ ಆಶ್ರಯಿಸುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.