ಎಲ್ಲವೂ ಖಾಸಗಿಕರಣಕ್ಕೆ ಮುಂದಾಗಿದ್ದೀರಾ ನಿರ್ಮಲಾ ಅವರೇ ?: ಕಾಂಗ್ರೆಸ್ ಟೀಕೆ
ಬೆಂಗಳೂರು, ಫೆ.22: 'ಪೆಟ್ರೋಲ್ ಬೆಲೆ ಏರಿಕೆ, ಇಳಿಕೆ ಎಲ್ಲವನ್ನೂ ಮೇಡಂ ನಹಿ ಡಿಸೈಡ್ ಮಾಡ್ತ, ಕಂಪೆನಿ ಡಿಸೈಡ್ ಮಾಡ್ತ. ಹೀಗೆ ಹೊಣೆಗಾರಿಕೆಯಿಂದ ಜಾರಿಕೊಳ್ಳಲೆಂದೆ ಎಲ್ಲವನ್ನೂ ಖಾಸಗೀಕರಣಕ್ಕೆ ಮುಂದಾಗಿದ್ದೀರಾ ನಿರ್ಮಲಾ ಸೀತಾರಾಮನ್ ಅವರೇ? 32.98 ರೂಪಾಯಿಗೆ ತೆರಿಗೆ ಏರಿಸಿದ್ದು ಖಾಸಗಿಯವರೋ, ಸರಕಾರವೋ? ‘ಮಿನಿಟ್ ಮೇಡಂ’ ಅವರನ್ನ ಕೇಳಿ ಹೇಳಿ ರಾಜ್ಯ ಬಿಜೆಪಿ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
"ಕುರುಡು ಕಾಂಚಾಣ ಕುಣಿಯುತ್ತಲಿತ್ತೋ ಕಾಲಿಗೆ ಬಿದ್ದವರ ತುಳಿಯುತ್ತಲಿತ್ತೋ" ಬೇಂದ್ರೆಯವರು ನಿಮ್ಮ ಭ್ರಷ್ಟ ಸರಕಾರಕ್ಕಾಗಿಯೆ ಬರೆದಂತಿದೆ ಅಲ್ಲವೇ ರಾಜ್ಯ ಬಿಜೆಪಿ? ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಪಾವತಿಸಿ ಮಂತ್ರಿಗಿರಿ ಪಡೆದವರು, ಬ್ಲಾಕ್ಮೇಲ್ ಮಾಡಿದವರು, ಸಿಡಿ ಬೆದರಿಕೆ ಹಾಕಿದವರು ಎಲ್ಲರೂ ಸಾರಾಸಗಟಾಗಿ ಸಾಲಿನಲ್ಲಿ ಊಟಕ್ಕೆ ಕುಳಿತಿದ್ದಾರೆ ಎಂದು, ‘ಹಣಕ್ಕಾಗಿ ಬಿಜೆಪಿ ಸರಕಾರದಲ್ಲಿ ಫೈಲ್ಗಳು ಕಾಯುತ್ತಿವೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾಡಿರುವ ಆರೋಪ’ವನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ತಳ ಸಮುದಾಯದಿಂದ ಬಂದವನೆಂದು ನಮ್ಮ ಪಕ್ಷದವರೇ ನನ್ನ ಸೋಲಿಸಿದರು’ ಎಂದು ಬಿ.ಶ್ರೀರಾಮುಲು ಹೇಳಿದ್ದಾರೆ. ತಳ ಸಮುದಾಯಗಳನ್ನ ಮನುವಾದಿ ಬಿಜೆಪಿ ಕತ್ತು ಹಿಸುಕಿ ಉಸಿರುಗಟ್ಟಿಸುತ್ತದೆಂದು ಸ್ವತಃ ಬಿಜೆಪಿಗರೆ ಇತ್ತೀಚೆಗೆ ಬಾಯಿ ಬಿಡುತ್ತಿದ್ದಾರೆ. ಇತರರ ದೋಸೆ ತೂತೆಂದು ಹೇಳುವ ಮುಂಚೆ ನಿಮ್ಮ ಕಾವಲಿಯ ತೂತನ್ನು ಮುಚ್ಚಿಕೊಳ್ಳುವುದು ಒಳಿತು ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.