ನಟ ಜಗ್ಗೇಶ್ ಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದ ದರ್ಶನ್ ಅಭಿಮಾನಿಗಳು
ಮೈಸೂರು,ಫೆ.22: ನಟ ದರ್ಶನ್ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ನಟ ಜಗ್ಗೇಶ್ ಅವರನ್ನು ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ, ಧಿಕ್ಕಾರ ಘೋಷಣೆ ಕೂಗಿದ್ದಾರೆ.
ಮೈಸೂರು ಜಿಲ್ಲೆಯ ಬನ್ನೂರು ಬಳಿಯ ಅತ್ತಳ್ಳಿ ಸಮೀಪ ಶೂಟಿಂಗ್ ಮಾಡುವ ವೇಳೆ ನಟ ಜಗ್ಗೇಶ್ ಅವರನ್ನು ಸುತ್ತುವರಿದ ದರ್ಶನ್ ಅಭಿಮಾನಿಗಳು ಜಗ್ಗೇಶ್ ರಿಗೆ ಬೈದು ಕ್ಷಮೆ ಕೇಳುವಂತೆ ಒತ್ತಾಯಿಸಿದರು.
ನಟ ದರ್ಶನ್ ರನ್ನು ಜಗ್ಗೇಶ್ ಅವರು ನಿಂದಿಸಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಇದರಿಂದ ದರ್ಶನ್ ಅಭಿಮಾನಿಗಳು ಫುಲ್ ಗರಂ ಆಗಿದ್ದರು. ಈ ಹಿನ್ನಲೆಯಲ್ಲಿ ನಟ ಜಗ್ಗೇಶ್ ಅವರನ್ನು ಇಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ನಟ ಜಗ್ಗೇಶ್ ಸಮಜಾಯಿಷಿ ಕೊಡಲು ಮುಂದಾದರೂ ಬಗ್ಗದ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಒತ್ತಾಯಿಸಿದರು. ನಾನು ಯಾರನ್ನೂ ನಿಂದಿಸಿಲ್ಲ, ನಾನು ದರ್ಶನ್ ಒಟ್ಟಿಗೆ ಇದ್ದೇವೆ. ದರ್ಶನ್ ಗೆ ನಾನು ಸಪೋರ್ಟ್ ಮಾಡಿದ್ದೇನೆ ಎಂದು ಹೇಳುತ್ತಿದ್ದಂತೆ ಮತ್ತಷ್ಟು ಕೆಂಡಾಮಂಡಲರಾದ ದರ್ಶನ್ ಅಭಿಮಾನಿಗಳು ನೀವೇನು ಅವರಿಗೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ವಿಚಲಿತರಾದ ಜಗ್ಗೇಶ್, ನಾನು ದರ್ಶನ್ ಬಗ್ಗೆ ಯಾವುದೇ ರೀತಿ ಮಾತನಾಡಿಲ್ಲ. ದರ್ಶನ್ ಮತ್ತು ನನ್ನ ನಡುವೆ ತಂದು ಹಾಕಲು ಕೆಲವರು ಮಾಡಿರುವ ಸಂಚು. ನಿಮಗೆ ಬೇಸರ ಇದ್ದರೆ ಕ್ಷಮೆ ಕೇಳುತ್ತೇನೆ. ಆದರೆ ನನ್ನ ಮಾತನ್ನು ಸುವರ್ಣ ಟಿವಿಯವರು ಮತ್ತು ಒಂದು ಪತ್ರಿಕೆಯವರು ತಿರುಚಿದ್ದಾರೆ ಎಂದು ಹೇಳಿದರು.