ವಿದ್ಯುತ್ ದರ ಏರಿಕೆಯಿಂದ ರಾಜ್ಯದ ಜನತೆಗೆ ಮತ್ತಷ್ಟು ಸಂಕಷ್ಟ: ಎಸ್ಡಿಪಿಐ
ಬೆಂಗಳೂರು, ಫೆ.21: ಬಿಜೆಪಿ ಸರಕಾರ ರಾಜ್ಯದ ಜನತೆಯ ಮೇಲೆ ತೆರಿಗೆ ಹೊರೆ ಹಾಕಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಜನರು ಈಗಾಗಲೆ ಕೊರೋನದಿಂದ ನಲುಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನತೆಯ ಮೇಲೆ ಹೆಚ್ಚುವರಿ ತೆರಿಗೆ ಹಾಕಿ ವಸೂಲಿಗೆ ಇಳಿದಿದ್ದಾರೆ. ಇದರಿಂದ ರಾಜ್ಯದ ಜನ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಕ್ರಮ್ ಹಸನ್ ತಿಳಿಸಿದ್ದಾರೆ.
ಜನರ ಜೀವನದ ಜತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ತೆರಿಗೆ ನೀತಿ ಖಂಡನೀಯ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅಭಿವೃದ್ಧಿಪರ ಕಾರ್ಯಗಳನ್ನು ಮರೆತು ಸಾಲ ಸಂಗ್ರಹಿಸುವುದರಲ್ಲೇ ದಾಖಲೆ ನಿರ್ಮಿಸಿದ್ದಾರೆ. ಈ ಸಾಲ ತೀರಿಸಲು ಜನರ ಮೇಲೆ ವಿದ್ಯುತ್ ದರ ಏರಿಕೆ ಹಾಗೂ ಬೆಂಗಳೂರು ನಗರ ನಿವಾಸಿಗಳ ಕಟ್ಟಡದ ಆಸ್ತಿ ತೆರಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈಗಾಗಲೇ ವಿದ್ಯುತ್ ಇಲಾಖೆ ಪ್ರತಿ ಯೂನಿಟ್ಗೆ ಶೇ.40ರಷ್ಟು ದರ ಏರಿಕೆ ಮಾಡಿರುವ ನೀತಿಯು ಖಂಡನೀಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.