ಬೇಕರಿ ಉತ್ಪನ್ನಗಳ ಉದ್ದಿಮೆ ಸ್ಥಾಪಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ಫೆ. 22: ಬೇಕರಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಘಟಕಗಳು, ಬ್ರ್ಯಾಂಡಿಂಗ್, ಲೇಬಲಿಂಗ್, ಮಾರುಕಟ್ಟೆ ಬೆಂಬಲ ಮತ್ತು ರಫ್ತಿಗೆ ಪ್ರೋತ್ಸಾಹ ನೀಡಲು ಆಸಕ್ತ ಸಂಸ್ಥೆ ಹಾಗೂ ಉದ್ದಿಮೆದಾರರಿಗೆ ಸಹಾಯ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆತ್ಮ ನಿರ್ಭರ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಸರಕಾರ ಪ್ರಧಾನ ಮಂತ್ರಿಗಳ ಅತೀ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ ಹೊಸದಾಗಿ ಉದ್ದಿಮೆ ಸ್ಥಾಪಿಸಲು ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆ 2020-21ರಿಂದ ಪ್ರಾರಂಭವಾಗಿ 2024-25ರವರೆಗೆ ಅನುಷ್ಠಾನಗೊಳಿಸಲಾಗಿದೆ. ಅಗತ್ಯ ತಾಂತ್ರಿಕ ಹಾಗೂ ಸಂಶೋಧನಾ ಬೆಂಬಲವನ್ನು ಕೇಂದ್ರಿಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಮೈಸೂರು ಮತ್ತು ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆಗಳಿಂದ ಫಲಾನುಭವಿಗಳಿಗೆ ನೆರವು ನೀಡಲಾಗುವುದು.
ಆಸಕ್ತರು ಬೆಂಗಳೂರು ನಗರ ಮತ್ತು ನಗರ ಜಿಲ್ಲೆ ನಿವಾಸಿಗಳಾಗಿದ್ದು, ಉದ್ಯಮದ ಮಾಲಕತ್ವ ಹೊಂದಿರಬೇಕು. ಅರ್ಜಿದಾರರು ಕನಿಷ್ಠ 18 ವರ್ಷ ಪೂರೈಸಿ, 8ನೆ ತರಗತಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಸಂಸ್ಥೆ ಅಸಂಘಟಿತವಾಗಿದ್ದು, 10ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರಬೇಕು. ಯೋಜನಾ ವೆಚ್ಚ ಹಾಲಿ ವೆಚ್ಚಕ್ಕಿಂತ ಕಡಿಮೆ ಇರಬಾರದು. ಉತ್ಪನ್ನ ನಿರ್ವಹಣೆಯಲ್ಲಿ ಕನಿಷ್ಟ 3ವರ್ಷಗಳ ಜ್ಞಾನ ಮತ್ತು ಅನುಭವ ಹೊಂದಿರಬೇಕು.
ಆಸಕ್ತ ಅರ್ಜಿದಾರರು ತಮ್ಮ ಘಟಕಗಳ ಕುರಿತು ಯೋಜನಾ ವರದಿ ತಯಾರಿಸಿ, ವರದಿ ಅನುಮೋದನೆ ನಂತರ ಕೇಂದ್ರ ಸರಕಾರದ ಪೋರ್ಟಲ್ PMFME (http://pmfme.mofpi.gov.in) (http://pmfme.mofpi.gov.in/mis)ನಲ್ಲಿ ನೋಂದಾಯಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಗೌತಮ್ ಮೊ.ಸಂ. 94487 52379, ಅಭಿಷೇಕ್-ಮೊ.ಸಂ.74119 18648, ಮಥುರಾ ಎಸ್.ಪೈ, ಮೊ.ಸಂ. 8277929923 ಅಥವಾ ಸಹಾಯಕ ಕೃಷಿ ನಿರ್ದೇಶಕರು ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಸಂಕೀರ್ಣ, ಬನಶಂಕರಿ, ಬೆಂಗಳೂರು ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ಕೋರಿದೆ.