ಮೌಲ್ಯಗಳು ಕುಸಿಯದಂತೆ ಎಚ್ಚರ ವಹಿಸಿದರೆ ಪ್ರಜಾತಂತ್ರಕ್ಕೆ ಅರ್ಥ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಫೆ. 24: ‘ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸಾಮಾನ್ಯ ಜನರ ಹಿತರಕ್ಷಣೆ ಮುಖ್ಯವಾಗಬೇಕು. ಅದರ ಜೊತೆಗೆ ಸಮಾಜದಲ್ಲಿನ ಶೋಷಿತರ ಮತ್ತು ದಮನಿತರ ಧ್ವನಿಯಾಗಿ ಅವರ ಪರವಾಗಿ ಕಾರ್ಯ ನಿರ್ವಹಿಸಬೇಕು' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಕರೆ ನೀಡಿದ್ದಾರೆ.
ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ‘ಕಾಮನ್ವೆಲ್ತ್ ಸಂಸದೀಯ ಸಂಘ' ಕರ್ನಾಟಕ ಶಾಖೆವತಿಯಿಂದ ‘ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ಆತ್ಮಾವಲೋಕನ' ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಈ ಹಿಂದೆ ಆಯ್ಕೆಯಾಗುತ್ತಿದ್ದ ರಾಜಕೀಯ ಮುತ್ಸದ್ದಿಗಳು ದೇಶಕ್ಕಾಗಿ ನಾವು ಎಂಬ ಭಾವನೆಯಲ್ಲಿದ್ದರು. ಆದರೆ, ಇಂದು ದೇಶ ಇರೋದೇ ನಮಗಾಗಿ ಎನ್ನುವ ಮನೋಭಾವನೆಯಲ್ಲಿದ್ದಾರೆ' ಎಂದು ಹೇಳಿದರು.
‘ಜನಪ್ರತಿನಿಧಿಗಳು ಎಲ್ಲರಿಗೂ ಆದರ್ಶಪ್ರಾಯರಾಗಿರಬೇಕು. ಜನಹಿತ ಬಿಟ್ಟು ಸ್ವಾರ್ಥಕ್ಕಾಗಿ ಅಧಿಕಾರವನ್ನು ಎಂದೂ ಬಳಸಬಾರದು' ಎಂದ ಸಲಹೆ ಮಾಡಿದ ಅವರು, ‘ಸದನದಲ್ಲಿ ಎಂದೂ ಅಹಿತಕರ ಘಟನೆಗಳು ನಡೆಯಬಾರದು. ಆ ರೀತಿ ನಡೆಯದಂತೆ ನಾವುಗಳು ಎಚ್ಚರಿಕೆ ವಹಿಸುವುದು ಅಗತ್ಯ. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ' ಎಂದರು.
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತಾನಾಡಿ, ‘ರಾಜಕಾರಣಕ್ಕೆ ಬರುವುದೇ ನಮ್ಮ ಪುಣ್ಯ. ನೂರರಲ್ಲಿ 10 ಮಂದಿ ಮಾತ್ರವೇ ರಾಜಕಾರಣಕ್ಕೆ ಬರಬಹುದು. ನಾವು ಹೇಗೆ ನಡೆದುಕೊಳ್ತೇವೆ ಎಂಬುದು ಬಹಳ ಮುಖ್ಯ. ಜನಪ್ರತಿನಿಧಿಗಳು ಜನರ ಧ್ವನಿಯಾಗಬೇಕೇ ಹೊರತು ವ್ಯವಸ್ಥೆಯ ಸುಳಿಯಾಗಬಾರದು' ಎಂದು ಮಾರ್ಮಿಕವಾಗಿ ನುಡಿದರು.
‘ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ನಾವು ಆಡಳಿತ ನಡೆಸಬೇಕು ಕರ್ನಾಟಕ ರಾಜ್ಯ ಈ ವಿಚಾರದಲ್ಲಿ ರಾಷ್ಟ್ರಕ್ಕೆ ಮೇಲ್ಪಂಕ್ತಿಯಾಗಬೇಕು. ಸಂವಿಧಾನದ ಜವಾಬ್ದಾರಿಗಳು ಸಾಕಷ್ಟಿವೆ. ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು ಎಂದ ಅವರು, ಮುಂದೊಂದು ದಿನ ಅರಾಜಕತೆ ಎದುರಾಗಬಹುದು. ಅಂತಹ ಪರಿಸ್ಥಿತಿ ಬರುವುದನ್ನು ತಡೆಯುವ ನಿಟ್ಟಿನಲ್ಲಿ ಚರ್ಚೆಗಳ ಅಗತ್ಯವಿದೆ' ಎಂದು ಅವರು ಹೇಳಿದರು.
ಕಲಾಪ ನಡೆಸಲು ಸಿದ್ಧ: ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಧಾನ ಮಂಡಲ ಕಲಾಪ ವಾರ್ಷಿಕ ಕನಿಷ್ಠ 60 ದಿನ ಸದನ ನಡೆಸಲು ನಾವು ಸಿದ್ಧ. ಈ ಸಂಬಂಧ ಉಭಯ ಸದನಗಳ ಕಲಾಪ ಸಲಹಾ ಸಮಿತಿ ಸಭೆ ನಡೆಸಿ ತೀರ್ಮಾನ ಮಾಡಲಿದ್ದು, ಇದಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ಸಹಕಾರ ನೀಡಬೇಕು ಎಂದು ಕೋರಿದರು.
ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸಚಿವರಾದ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಮಾಜಿ ಸಭಾಪತಿಗಳಾದ ಶಂಕರಮೂರ್ತಿ, ಬಿ.ಎಲ್.ಶಂಕರ್, ವಿ.ಆರ್. ಸುದರ್ಶನ್, ಮಾಜಿ ಸ್ಪೀಕರ್ ಗಳಾದ ಕೆ.ಆರ್.ರಮೇಶ್ ಕುಮಾರ್, ಕೆ.ಜಿ.ಬೋಪಯ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.