ಶಿವಮೊಗ್ಗ: ದರೋಡೆಗೆ ಯತ್ನ ಆರೋಪ; ಮೂವರ ಸೆರೆ
ಶಿವಮೊಗ್ಗ: ದರೋಡೆಗೆ ಯತ್ನಿಸುತ್ತಿದ್ದ ಆರೋಪದಲ್ಲಿ ಮೂರು ಮಂದಿ ಆರೋಪಿಗಳನ್ನು ತುಂಗಾನಗರ ಠಾಣೆ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ತುಂಗಾನಗರ ಠಾಣೆ ವ್ಯಾಪ್ತಿಯ ವಾಜಪೇಯಿ ಬಡಾವಣೆಯಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿರುವ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗ ಉಪವಿಭಾಗದ ಡಿವೈಎಸ್ ಪಿ ಪ್ರಶಾಂತ್ ಮುನ್ನೋಳಿ, ತುಂಗಾನಗರ ಸಿಪಿಐ ದೀಪಕ್ ಮಾರ್ಗದರ್ಶನದಲ್ಲಿ ತುಂಗಾನಗರ ಠಾಣೆ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್ ನೇತೃತ್ವದ ತಂಡ ದಾಳಿ ನಡೆಸಿ ಗಾಡಿಕೊಪ್ಪದ ಸಂತೋಷ್, ಬೊಮ್ಮನಕಟ್ಟೆ ನಿವಾಸಿ ರೂಪೇಶ್ ಹಾಗೂ ಎನ್.ಟಿ ರಸ್ತೆಯ ಶ್ರೀಹರಿ ಅಲಿಯಾಸ್ ಕಡ್ಡಿ ಎಂಬುವವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ 1 ಕಬ್ಬಿಣದ ರಾಡು, ಒಂದು ಚಾಕು, ಖಾರದ ಪುಡಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸಯ್ಯದ್ ಇಮ್ರಾನ್, ರಾಜು, ರವೀಂದ್ರ ಭಾಗಿಯಾಗಿದ್ದರು.