ಚಿಕ್ಕಮಗಳೂರು: ಸಕಾಲ ಅನುಷ್ಠಾನದಲ್ಲಿ ಜಿಲ್ಲೆಗೆ ಮೊದಲ ಸ್ಥಾನ; ಸಚಿವ ಸುರೇಶ್ ಕುಮಾರ್ ಮೆಚ್ಚುಗೆ
ಚಿಕ್ಕಮಗಳೂರು, ಫೆ.25: ಸಕಾಲ ಯೋಜನೆಯಡಿ 2021ರ ಜನವರಿ ಮಾಹೆಯಲ್ಲಿ ಅರ್ಜಿ ಸ್ವೀಕರಿಸಿ ವಿಲೇವಾರಿ ಮಾಡಿದ ಜಿಲ್ಲೆಗಳಲ್ಲಿ ಕಾಫಿನಾಡು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಂಗಳೂರಿನ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಮತ್ತು ಉತ್ತಮ ಕಾರ್ಯನಿರ್ವಹಿಸಿದ ಜಿಲ್ಲೆಗಳಿಗೆ ಪುರಸ್ಕಾರವನ್ನು ಪ್ರಕಟಿಸಿ ಮಾತನಾಡಿದ ಅವರು, ಜನವರಿ ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 67,093 ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಲಾಗಿದ್ದು, ಈ ಪೈಕಿ 57,861 ಅರ್ಜಿಗಳನ್ನು ವಿಲೇವಾರಿ ಮಾಡಿ ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೊದಲ ಸ್ಥಾನಗಳಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆ 2ನೇ ಸ್ಥಾನದಲ್ಲಿದ್ದು, ಶಿವಮೊಗ್ಗ ಜಿಲ್ಲೆ 3ನೇ ಸ್ಥಾನ ಪಡೆದುಕೊಂಡಿದೆ, ಬೆಂಗಳೂರು ನಗರ ಕೊನೆಯ ಸ್ಥಾನದಲ್ಲಿದೆ. ತಾಲೂಕುವಾರು ಬೆಂಗಳೂರು ದಕ್ಷಿಣ ತಾಲೂಕು ಮೊದಲ ಸ್ಥಾನ ಪಡೆದಿದೆ ಎಂದರು.
ನವೆಂಬರ್ ನಲ್ಲಿ ಮೊದಲ ಸ್ಥಾನ ಗಳಿಸಿದ್ದ ಮಂಡ್ಯ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿಯನ್ನು ಗೌರವಿಸಲಾಯಿತು. ಜನವರಿಯಲ್ಲಿ ಸಕಾಲ ಮೂಲಕ ಅರ್ಜಿ ವಿಲೇವಾರಿ ಪ್ರಮಾಣ ಶೇ.93.25ರಷ್ಟಿದ್ದು, 27,45,997 ಅರ್ಜಿ ಸ್ವೀಕಾರ ಮಾಡಲಾಗಿದೆ. ಈ ಪೈಕಿ 22,88,794 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಮುಂದೆ ಎಲ್ಲಾ ಜಿಲ್ಲೆಗಳಲ್ಲಿ ಸಕಾಲ ಸಪ್ತಾಹ ಕಡ್ಡಾಯಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಸುರೇಶ್ಕುಮಾರ್, ಎಲ್ಲಾ ಅಪರ ಜಿಲ್ಲಾಧಿಕಾರಿಗಳು ಪ್ರತೀ ಸೋಮವಾರ ಸಕಾಲ ವಿವರಗಳ ಪ್ರಗತಿಯನ್ನು ಪರಿಶೀಲಿಸಬೇಕು. ಪರಿಶೀಲನಾ ಸಮಿತಿ ಪ್ರತೀ ಶನಿವಾರ ತಮ್ಮ ವ್ಯಾಪ್ತಿಯಲ್ಲಿನ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿ ಸಕಾಲದಲ್ಲಿ ಸ್ವೀಕೃತವಾಗಿರುವ ಅರ್ಜಿ ನಿಗಧಿತ ಅವಧಿಯಲ್ಲಿ ವಿಲೇವಾರಿಯಾಗಿದೆಯೇ ಎಂಬುದರ ಕುರಿತು ಪರಿಶೀಲಿಸಬೇಕು. ವಿಲೇವಾರಿ ಮಾಡದಿದ್ದರೆ ಕಾರಣ ಹುಡುಕಬೇಕು ಎಂದ ಅವರು, ಎಲ್ಲಾ ಕಚೇರಿಗಳ ಮುಂದೆ ಸಕಾಲ ಮಾಹಿತಿ ಫಲಕವನ್ನು ಕಡ್ಡಾಯಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ರವಿಕುಮಾರ್, ಇ ಆಡಳಿತದ ಹೆಚ್ಚುವರಿ ಕಾರ್ಯದರ್ಶಿ ರಾಜೀವ್ ಚಾವ್ಲಾ, ಸಕಾಲ ಮಿಷನ್ ನಿರ್ದೇಶಕಿ ಬಿ.ಆರ್.ಮಮತಾ ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ವೀಡಿಯೊ ಸಂವಾದದಲ್ಲಿ ಉಪಸ್ಥಿತರಿದ್ದರು.