ಪೌರಕಾರ್ಮಿಕ ನಾರಾಯಣ್ ಕುಟುಂಬಕ್ಕೆ ಎಂ.ಶಿವಣ್ಣ ಸಾಂತ್ವನ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ
ಮಂಡ್ಯ, ಫೆ.25: ಮದ್ದೂರು ಪುರಸಭೆ ಪೌರಕಾರ್ಮಿಕ ನಾರಾಯಣ್ ಆತ್ಮಹತ್ಯೆ ಬಗ್ಗೆ ಸೂಕ್ತ ತನಿಖೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿದ್ದಾರೆ.
ಮೃತ ಪೌರಕಾರ್ಮಿಕ ನಾರಾಯಣರವರ ಮನೆಗೆ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಸಮಸ್ಯೆಗಳನ್ನು ಆಲಿಸಿದ ಅವರು, ಈ ಬಗ್ಗೆ ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಂತರ ಪುರಸಭೆಯಲ್ಲಿ ಸಭೆ ನಡೆಸಿದ ಅವರು, ಪುರಸಭೆ ಮುಖ್ಯಾಧಿಕಾರಿ ಮುರುಗೇಶ್, ಆರೋಗ್ಯಾಧಿಕಾರಿ ಝಾಸಿಂಖಾನ್ ವಿರುದ್ಧ ನಾರಾಯಣ್ ಅತ್ತೆ ದೂರು ನೀಡಿದ್ದು, ಈ ಬಗ್ಗೆ ತುರ್ತಾಗಿ ತನಿಖೆ ನಡೆಸಿ ವರದಿ ಕೊಡಲು ಸೂಚಿಸಿದ್ದೇನೆ. ಡೆತ್ನೋಟ್ನ್ನು ಹ್ಯಾಂಡ್ರೇಟಿಂಗ್ ಎಕ್ಸ್ ಪರ್ಟ್ಗೆ ಕಳುಹಿಸಿಕೊಡಲಾಗಿದೆ ಎಂದರು.
ನಾರಾಯಣ್ ಮ್ಯಾನ್ಹೋಲ್ನಲ್ಲಿ ಇಳಿದಿರುವ ವೈರಲ್ ಆಗಿರುವ ವಿಡೀಯೋ, ಪತ್ರಿಕಾ ವರದಿಗಳನ್ನು ಗಮನಿಸಿದ್ದೇವೆ. ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡಿದ್ದೇವೆ. ಇದೆಲ್ಲಾವನ್ನು ತನಿಖೆ ನಡೆಸಿ ಸಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾಮಟ್ಟದಲ್ಲಿ ತನಿಖೆ ನಡೆಸಲಾಗುವುದು. ಒಂದು ವೇಳೆ ಅದು ಸಮಂಜಸವೆನಿಸದಿದ್ದರೆ ಯೋಗದ ಮಟ್ಟದಲ್ಲೇ ತನಿಖೆ ನಡೆಸಲಾಗುವುದು. ಆಯೋಗ ಇರುವುದೇ ಪೌರಕಾರ್ಮಿಕರ ರಕ್ಷಣೆಗಾಗಿ, ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮರಣೋತ್ತರ ವರದಿ ಈ ಸಂಜೆಯೊಳಗೆ ಬರಲಿದ್ದು, ಪರಿಶಿಷ್ಟ ದೌರ್ನಜ್ಯ ವಿರುದ್ಧ ಕಾಯ್ದೆಯಡಿ 8.25 ಲಕ್ಷ ರೂ. ಪರಿಹಾರದಲ್ಲಿ ತಕ್ಷಣ 4.12 ಲಕ್ಷ ರೂ.ಗಳನ್ನು ನಾರಾಯಣ್ ಕುಟುಂಬದವರಿಗೆ ನೀಡಲಾಗುವುದು. ಉಳಿಕೆ ಪರಿಹಾರವನ್ನು ವರದಿ ನಂತರ ಪಾವತಿಸಲಾಗುವುದು ಎಂದು ಅವರು ಹೇಳಿದರು.
ನಾರಾಯಣ್ ಅವರ ಮೂರು ಮಕ್ಕಳನ್ನು ವಸತಿ ಶಾಲೆಗೆ ಸೇರಿಸಿ ಅವರು ಎಲ್ಲಿವರೆಗೆ ಓದುತ್ತಾರೋ ಅಲ್ಲಿವರೆಗೆ ಉಚಿತವಾಗಿ ಶಿಕ್ಷಣ ನೀಡಲು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದ್ದೇವೆ. ಕುಟುಂಬ ನಿರ್ವಹಣೆ ಮಾಡುತ್ತಿದ್ದ ಮಹದೇವಿ ಅವರಿಗೆ ಅನುಕಂಪದ ಆಧಾರದಲ್ಲಿ ಕೆಲಸ ಕೊಡಿಸಲಾಗುವುದು ಎಂದು ಅವರು ತಿಳಿಸಿದರು.
ಕಾಡಾ ಅಧ್ಯಕ್ಷ ಶಿವಲಿಂಗಯ್ಯ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ತಹಶೀಲ್ದಾರ್ ವಿಜಯ್ಕುಮಾರ್, ವಾರ್ತಾಧಿಕಾರಿ ಟಿ.ಕೆ.ಹರೀಶ್, ಮದ್ದೂರು ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.