ಮಂಡ್ಯ: ಕೃಷಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆಗೆ ಒತ್ತಾಯ
ಮಂಡ್ಯ, ಫೆ.25: ಪ್ರಸಕ್ತ ರಾಜ್ಯ ಬಜೆಟ್ನಲ್ಲಿ ಕೃಷಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆ ಹಾಗೂ ಕೃಷಿ ಕೂಲಿಕಾರರ ಸಮಗ್ರ ಕಾನೂನು ಜಾರಿಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಗುರುವಾರ ನಗರದಲ್ಲಿ ಧರಣಿ ನಡೆಸಿದರು.
ಸಿಲ್ವರ್ ಜ್ಯುಬಿಲಿ ಪಾರ್ಕ್ನಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದ ಕೂಲಿಕಾರರು, ಕೇರಳ, ತ್ರಿಪುರ, ತಮಿಳುನಾಡು ರಾಜ್ಯದ ಮಾದರಿಯಲ್ಲಿ ಕೃಷಿ ಕೂಲಿಕಾರರಿಗೆ ಕನಿಷ್ಠ ವೇತನ. ತುಟ್ಟಿಭತ್ಯೆ, ಭವಿಷ್ಯ ನಿಧಿ, ಇಎಸ್ಐ ಹಾಗೂ ನಿವೃತ್ತಿ ವೇತನ ನೀಡುವ ಸಮಗ್ರ ಕಾನೂನು ಜಾರಿಗೆ ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರಿಗೆ ಇರುವಂತೆ ಕೃಷಿ ಕಾರ್ಮಿಕರಿಗೂ ಕಲ್ಯಾಣ ನಿಧಿ ಸ್ಥಾಪಿಸಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡಲಾಗುವ ಸೌಲಭ್ಯವನ್ನು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನ ಕೆಲಸ ಕೊಟ್ಟು ದಿನಕ್ಕೆ 600 ರೂ. ಕೂಲಿ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಕೆಹನುಮೇಗೌಡ, ತಿಮ್ಮೇಗೌಡ, ಬಿ.ಎಂ.ಶಿವಮಲ್ಲಯ್ಯ, ಸರೋಜಮ್ಮ, ಅನಿತಾ, ಅಜಯ್, ರಾಮಣ್ಣ, ಬಸವರಾಜು, ಎನ್.ಸುರೇಂದ್ರ, ಶಿವಮೂರ್ತಿ, ಅಮಾಸಯ್ಯ ನೇತೃತ್ವ ವಹಿಸಿದ್ದರು.