ಲಂಚ ಸ್ವೀಕಾರ: ಗ್ರಾ.ಪಂ. ಪಿಡಿಒ, ಸಿಬ್ಬಂದಿ ಎಸಿಬಿ ಬಲೆಗೆ
ಮೈಸೂರು,ಫೆ.26: ಖಾತೆ ಬದಲಾವಣೆ ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದ ಗ್ರಾ.ಪಂ. ಪಿಡಿಒ ಮತ್ತು ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾ.ಪಂ. ಪಿಡಿಒ ಲೋಕೇಶ್ ಕುಮಾರ್ ಹಾಗೂ ಎಸ್ಡಿಎ ವೆಂಕಟರಾಜು ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಮಾದಾಪುರ ಗ್ರಾ.ಪಂ.ನ ವ್ಯಕ್ತಿಯೊಬ್ಬರು ನಿವೇಶನವೊಂದರ ಖಾತೆ ಬದಲಾವಣೆ ಸಂಬಂಧ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಕೇಶವರಾವ್ ಅವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ನೀಡಿದ್ದರು.
ಎಸಿಬಿ ಅಧಿಕಾರಿಗಳ ಸೂಚನೆ ಮೇರೆಗೆ ಶುಕ್ರವಾರ 10 ಸಾವಿರ ರೂ. ಹಣ ನೀಡಬೇಕಾದರೆ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಎಸಿಬಿ ಎಸ್ಪಿ ಅರುಣಾಂಕ್ಷು ಗಿರಿ ಅವರ ಸೂಚನೆ ಮೇರೆಗೆ ಡಿವೈಎಸ್ಪಿ ಪರುಶರಾಮಪ್ಪ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳಾದ ಕರೀಂ ರಾವ್ತರ್, ಕೆ.ನಿರಂಜನ್ ದಾಳಿ ನಡೆಸಿದ್ದಾರೆ. ಸಿಬ್ಬಂದಿಗಳಾದ ಕುಮಾರ್ ಆರಾಧ್ಯ, ಗುರುಪ್ರಸಾದ್, ಪಾಪಣ್ಣ, ಯೋಗೇಶ್, ಚೇತನ್, ಪುಷ್ಪಲತ ಸಹಕಾರ ನೀಡಿದ್ದಾರೆ.