ನ್ಯಾಯಾಲಯ ಆವರಣದಲ್ಲೇ ಮಾರಕಾಸ್ತ್ರಗಳಿಂದ ನ್ಯಾಯವಾದಿಯ ಕಗ್ಗೊಲೆ
ಬಳ್ಳಾರಿ, ಫೆ.27: ಹೊಸಪೇಟೆ ನಗರದ ನ್ಯಾಯಾಲಯದ ಆವರಣದಲ್ಲಿಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನ್ಯಾಯವಾದಿಯನ್ನು ಕೊಲೆಗೈದಿರುವ ಘಟನೆ ವರದಿಯಾಗಿದೆ.
ಶನಿವಾರ ಬೆಳಗ್ಗೆ 11:45ರ ಸುಮಾರಿಗೆ ಈ ಘಟನೆ ನಡೆದಿದ್ದು, ವಕೀಲರ ಸಂಘದ ಮಾಜಿ ಕಾರ್ಯದರ್ಶಿ ತಾರಿಹಳ್ಳಿ ವೆಂಕಟೇಶ ಕೊಲೆಗೀಡಾದ ನ್ಯಾಯವಾದಿ ಎಂದು ತಿಳಿದುಬಂದಿದೆ.
ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತ್ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನೋಟರಿ ಕಲ್ಲಂಭಟ್ ಅವರ ಬಳಿ ಮಾತನಾಡುತ್ತ ಕುಳಿತಿರುವಾಗ ವೆಂಕಟೇಶ ಅವರ ಸಂಬಂಧಿ ಮನೋಜ್ ಎಂಬಾತ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿದ್ದಾನೆ ಎನ್ನಲಾಗಿದೆ.
ಕುರ್ಚಿಯಲ್ಲಿ ಕುಳಿತ ವೆಂಕಟೇಶ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ಮನೋಜ್ ಪೊಲೀಸರಿಗೆ ಶರಣಾಗಿದ್ದು, ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಮನೋಜ್ ಹಾಗೂ ಮೃತ ವೆಂಕಟೇಶ್ ಇಬ್ಬರು ಸಂಬಂಧಿಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಈ ಕೃತ್ಯವೆಸಗಿದ್ದಾನೆ ಎನ್ನುವ ಮಾಹಿತಿ ಮೇಲ್ನೋಟಕ್ಕೆ ಗೊತ್ತಾಗಿದೆ.
Next Story