ಉಪಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಅಭ್ಯರ್ಥಿಗಳ ಘೋಷಣೆ: ಯಡಿಯೂರಪ್ಪ
ಶಿವಮೊಗ್ಗ, ಮಾ.1: ಉಪಚುನಾವಣೆಗೆ ಪಕ್ಷ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣೆ ದಿನಾಂಕ ನಿಗದಿಪಡಿಸುತ್ತಿದ್ದಂತೆ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ಕ್ಷೇತ್ರ ಹಾಗೂ ಮಸ್ಕಿ, ಬಸವ ಕಲ್ಯಾಣ, ಸಿಂಧಗಿ ವಿಧಾನ ಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಉಪಚುನಾವಣೆಗೆ ರಾಜ್ಯಾಧ್ಯಕ್ಷರು ಉಸ್ತುವಾರಿಗಳನ್ನ ನೇಮಿಸಿದ್ದಾರೆ. ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಅಭ್ಯರ್ಥಿಗಳನ್ನು ಕೂಡ ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ಬೆಳಗಾವಿ ಲೋಕಸಭೆ ಹಾಗೂ 3 ವಿಧಾನಸಭೆ ಉಪ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಆಗುವ ನಿರೀಕ್ಷೆ ಇದೆ ಎಂದರು. ಪ್ರಧಾನಿ ಮೋದಿ ಇಂದು ದೆಹಲಿಯ ಏಮ್ಸ್ ನಲ್ಲಿ ಕೊರೋನ ಲಸಿಕೆ ಹಾಕಿಸಿಕೊಂಡಿದ್ದಾರೆ. ಇಂದಿನಿಂದ ಮತ್ತೆ ಲಸಿಕೆ ನೀಡಿಕೆ ಕಾರ್ಯ ಆರಂಭವಾಗಿದ್ದು, ನಾನು ಲಸಿಕೆ ಹಾಕಿಸಿಕೊಳ್ಳುವೆ. ಸಾರ್ವಜನಿಕರು ಕೂಡ ಲಸಿಕೆ ಪಡೆದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು, 45 ವರ್ಷ ಮೇಲ್ಪಟ್ಟ ಆರೋಗ್ಯ ತೊಂದರೆ ಇರುವವರು ಲಸಿಕೆ ಪಡೆದುಕೊಳ್ಳುವಂತೆ ತಿಳಿಸಿದರು.