ಸಚಿವ ಮುರುಗೇಶ್ ನಿರಾಣಿಯನ್ನು ಪ್ರಶ್ನಿಸಿದ್ದಕ್ಕೆ ನೋಟಿಸ್ ಜಾರಿ: ಕಾರ್ಮಿಕರಿಂದ ತೀವ್ರ ಆಕ್ರೋಶ
ರಾಯಚೂರು, ಮಾ.1: ರಾಯಚೂರಿನ ಹಟ್ಟಿ ಚಿನ್ನದ ಕಂಪೆನಿಯಲ್ಲಿ ಕೆಲಸ ಮಾಡುವಾಗ ಸತ್ತವರ ಕುಟುಂಬಸ್ಥರಿಗೆ ಕೆಲಸ ನೀಡದಿರುವ ಬಗ್ಗೆ ಸಚಿವ ಮುರುಗೇಶ್ ನಿರಾಣಿ ಅವರನ್ನು ಪ್ರಶ್ನಿಸಿದ ಬೆನ್ನಲ್ಲೇ ಹಟ್ಟಿ ಚಿನ್ನದ ಗಣಿ ಕಂಪೆನಿಯ ಆಡಳಿತ ಮಂಡಳಿಯು ಕಾರ್ಮಿಕರಿಗೆ ನೋಟಿಸ್ ಜಾರಿ ಮಾಡಿದೆ. ನೋಟಿಸ್ ಜಾರಿಗೆ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಪನಿಯಲ್ಲಿನ ಅನ್ಯಾಯಗಳ ಕುರಿತು ಸಚಿವರನ್ನ ಪ್ರಶ್ನೆ ಮಾಡಿದ್ದ ಕಾರ್ಮಿಕರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇ ತಪ್ಪಾಯ್ತಾ? ಎಂದು ಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.
ಫೆ.26ರಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ರಾಯಚೂರಿನ ಹಟ್ಟಿ ಚಿನ್ನದ ಕಂಪೆನಿಗೆ ಭೇಟಿ ನೀಡಿದ್ದರು. ಈ ವೇಳೆ ಸಚಿವರನ್ನು ಮುತ್ತಿಗೆ ಹಾಕಿದ ಕಾರ್ಮಿಕರು, 'ನಾವು ಸತ್ತ ಮೇಲೆ ನಮ್ಮ ಕುಟುಂಬದವರು ಏನು ಮಾಡಬೇಕು? ಈ ಕಂಪೆನಿಯಲ್ಲಿ ಕೆಲಸ ಮಾಡುವಾಗ ಸತ್ತವರ ಕುಟುಂಬಸ್ಥರಿಗೆ ಕೆಲಸ ನೀಡಿಲ್ಲ. ಈ ರೀತಿ 60 ಜನ ಸಂತ್ರಸ್ತರಿದ್ದು, ಕಳೆದ ಮೂರು ವರ್ಷಗಳಿಂದ ಯಾರಿಗೂ ಕೆಲಸ ಕೊಟ್ಟಿಲ್ಲ. ನಾವು ಸತ್ತ ಮೇಲೆ ನಮ್ಮ ಕುಟುಂಬದವರು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದರು.
ಅಲ್ಲದೇ, ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸಚಿವರಿಗೆ ಘೇರಾವ್ ಹಾಕಲು ಯತ್ನಿಸಿದ್ದರು. ಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕು, ಜೊತೆಗೆ ಅನ್ಫಿಟ್ ಆದರೆ ಅವರ ಕಟುಂಬಸ್ಥರಿಗೆ ಕೆಲಸ ಕೊಡಬೇಕು ಎಂದು ಆಗ್ರಹಿಸಿದ್ದ ಕಾರ್ಮಿಕರು, ಗಣಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ದೂರಿದ್ದರು.
ಇದೀಗ ಸಚಿವರು ಭೇಟಿ ನೀಡಿದ್ದ ವೇಳೆ ಗಣಿ ಆವರಣದಲ್ಲಿ ಗಲಾಟೆ ಮಾಡಲು ಮುಂದಾಗಿದ್ದಲ್ಲದೆ, ಮಾಧ್ಯಮಗಳ ಮುಂದೆ ಮಾತನಾಡಿದ್ದೀರಿ ಎಂದು ಹಲವು ಕಾರ್ಮಿಕರಿಗೆ ನೋಟಿಸ್ ನೀಡಿರುವ ಹಟ್ಟಿ ಚಿನ್ನದ ಗಣಿ ಕಂಪೆನಿಯ ಆಡಳಿತ ಮಂಡಳಿ, ಮೂರು ದಿನದೊಳಗೆ ನೋಟಿಸ್ಗೆ ಉತ್ತರಿಸುವಂತೆ ಸೂಚಿಸಿದೆ. ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಕ್ಕೆ ಇದೆಂಥಾ ಶಿಕ್ಷೆ? ಎಂದು ನೋಟಿಸ್ ನೀಡಿದ್ದಕ್ಕೆ ಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.