ತನ್ವೀರ್ ಸೇಠ್ ರಾಜಕೀಯವಾಗಿ ತಬ್ಬಲಿಯಾದರೆ ಜೆಡಿಎಸ್ ರಕ್ಷಣೆ ಕೊಡಲಿದೆ: ಕುಮಾರಸ್ವಾಮಿ
ಮೈಸೂರು, ಫೆ.5: ಶಾಸಕ ತನ್ವೀರ್ ಸೇಠ್ ರಾಜಕೀಯವಾಗಿ ತಬ್ಬಲಿಯಾದರೆ ಅವರಿಗೆ ಜೆಡಿಎಸ್ ಪಕ್ಷ ರಕ್ಷಣೆ ಕೊಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾನಾಡಿದ ಅವರು, ಮೈಸೂರು ಮೇಯರ್ ಚುನಾವಣೆಯಲ್ಲಿ ಶಾಸಕ ತನ್ವೀರ್ ಸೇಠ್ ಕೋಮುವಾದಿಗಳನ್ನು ದೂರ ಇಡಲು ಜೆಡಿಎಸ್ ಜೊತೆ ಕೈಜೋಡಿಸಿದ್ದೇನೆ ಎಂದು ಹೇಳಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಮೇಯರ್ ಮಾಡಲು ಸಹಕರಿಸಿದ ತನ್ವೀರ್ ಸೇಠ್ ಗೆ ಅನಾನುಕೂಲ ಆದರೆ ಜೆಡಿಎಸ್ ಪಕ್ಷ ಅವರ ಜೊತೆ ಇರಲಿದೆ ಎಂದು ನುಡಿದರು.
ಶಾಸಕ ತನ್ವೀರ್ ಅವರಿಗೆ ರಕ್ಷಣೆಯ ಅವಶ್ಯಕತೆ ಇಲ್ಲ. ಅವರನ್ನು ಸೋಲಿಸಲು ನಾವು ಪ್ರಯತ್ನ ಪಟ್ಟಿದ್ದೇವೆ. ಬೇರೆಯವರೂ ಪ್ರಯತ್ನಿಸಿದ್ದಾರೆ. ಆದರೆ ಅವರು ಕ್ಷೇತ್ರದಲ್ಲಿ ಅವರದೇ ಆದ ಶಕ್ತಿಯನ್ನು ಹೊಂದಿದ್ದಾರೆ. ಹಾಗಾಗಿ ಅವರಿಗೆ ಯಾರ ರಕ್ಷಣೆಯ ಅಗತ್ಯ ಬರುವುದಿಲ್ಲ ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಅವರ ಜೊತೆಯಲ್ಲಿ ನಾವು ಇರುತ್ತೇವೆ. ಕೆಟ್ಟ ಶಕ್ತಿಗಳನ್ನು ದೂರ ಇಡುವ ನಿಟ್ಟಿನಲ್ಲಿ ಅವರ ನಿರ್ಧಾರ ಸರಿಯಾಗಿದೆ. ಬಿಜೆಪಿ ದೂರ ಇಡಬೇಕು, ಜೆಡಿಎಸ್ ದೂರ ಇಡಬೇಕು ಅಂತ ಹೇಳುವವರು ತನ್ವೀರ್ ಸೇಠ್ ನಿರ್ಧಾರದ ಬಗ್ಗೆ ಸರ್ಟಿಫಿಕೇಟ್ ಕೊಡಲು ಹೊರಟಿದ್ದಾರೆ. ಇದೆಲ್ಲವನ್ನು ನಾನು ಗಮನಿಸಿದ್ದೇನೆ ಎಂದು ಹೇಳಿದರು.
ಒಂದು ದೇಶ ಒಂದು ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೊದಲು ಹಣದಿಂದ ಚುನಾವಣೆ ನಡೆಯೋದು ನಿಲ್ಲಬೇಕು. ಚುನಾವಣೆಯ ವ್ಯವಸ್ಥೆಯ ಲೋಪ ಬದಲಾಗಬೇಕು. ಹಣವಿದ್ದವರಿಗೆ ಮಾತ್ರ ಚುನಾವಣೆ ಅನ್ನೋದು ನಿಲ್ಲಬೇಕು. ಆ ನಂತರ ಇದರ ಬಗ್ಗೆ ಮಾತಾಡೋಣ. ನಮ್ಮನ್ನು ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದರು.