ತಮ್ಮನ್ನೇ ರಕ್ಷಣೆ ಮಾಡಿಕೊಳ್ಳದ ಸಚಿವರು ರಾಜ್ಯದ ಜನರಿಗೆ ಹೇಗೆ ರಕ್ಷಣೆ ನೀಡುತ್ತಾರೆ ?: ಸುಪ್ರೀಂ ವಕೀಲ ಸಂಕೇತ್ ಏಣಗಿ
ಬೆಂಗಳೂರು, ಮಾ. 6: ತಮ್ಮನ್ನೆ ರಕ್ಷಣೆ ಮಾಡಿಲು ಕೊಳ್ಳಲು ಆಗದೆ ಆರು ಮಂದಿ ಸಚಿವರು ರಕ್ಷಣೆ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಇಂತಹವರಿಂದ ರಾಜ್ಯದ ಜನತೆ ರಕ್ಷಣೆಗೆ ಸಾಧ್ಯವೇ ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್ನ ವಕೀಲ ಸಂಕೇತ್ ಏಣಗಿ, ಇವರೆಲ್ಲರಿಗೂ ತಪ್ಪು ಮಾಡಿರುವ ಅಪರಾಧಿ ಮನೋಭಾವ ಕಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇವರಿಗೆ ಯಾವುದೋ ಆತಂಕವಿದೆ. ಹೀಗಾಗಿ ಕೋರ್ಟ್ ಮೆಟ್ಟಿಲೇರಿದ್ದು, ಅವರೆಲ್ಲರೂ ಸತ್ಯಹರಿಶ್ಚಂದ್ರರಾಗಿದ್ದರೆ ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಸಿಎಂಗೆ ತನಿಖೆ ನಡೆಸಲು ಆಗ್ರಹಿಸಬೇಕಿತ್ತು ಎಂದು ಸಲಹೆ ಮಾಡಿದರು.
ಮುಂಬೈಗೆ ತೆರಳಿದ 17 ಮಂದಿಯೊಂದಿಗೆ ಇದ್ದ ಎಚ್.ವಿಶ್ವನಾಥ್, ಯೋಗೇಶ್ವರ್ ಸಾಧನೆ ಏನು ಎಂದು ಪ್ರಶ್ನಿಸಿದ್ದಾರೆ. ಸಿಡಿ ಇಟ್ಟುಕೊಂಡು ಮಂತ್ರಿ ಆಗಿದ್ದಾರೆಂದು ಆರೋಪ ಮಾಡಿದ್ದಾರೆ. ಹೀಗಾಗಿ ಇದು ಒಂದು ರೀತಿಯಲ್ಲಿ ಸಿಡಿ ಸರಕಾರ ಎಂದು ಲೇವಡಿ ಮಾಡಿದ ಸಂಕೇತ್ ಏಣಗಿ, ರಾಜ್ಯದಲ್ಲಿ ಯಡಿಯೂರಪ್ಪ ಆಡಳಿತವಿಲ್ಲ. ಬದಲಿಗೆ ಸಿಡಿ ಇಟ್ಟುಕೊಂಡಿರುವವರು ಆಡಳಿತ ನಡೆಸುತ್ತಿರುವ ಸಂಶಯವಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಎಫ್ಐಆರ್ ದಾಖಲಿಸಿ: ಸಂತ್ರಸ್ತರೇ ದೂರು ಕೊಡಬೇಕೆಂದು ಇಲ್ಲ. ಅವರ ಪರವಾಗಿ ಯಾರು ಬೇಕಾದರೂ ದೂರು ಕೊಡಬಹುದು. ಫಿರ್ಯಾದಿದಾರರಿಗೆ ಇನ್ಫಾರ್ಮೆಂಟ್ ಎನ್ನುತ್ತೇವೆ. ಅವರು ಠಾಣೆ ಮೆಟ್ಟಿಲೇರಿದಾಗ ದೂರು ದಾಖಲಿಸಬೇಕು. ಪುರಾವೆಗಳು ಇದ್ದರೆ ತಕ್ಷಣವೇ ಎಫ್ಐಆರ್ ಮಾಡಬೇಕು. ಈ ಪ್ರಕರಣದಲ್ಲಿ ಆಡಿಯೋ, ವಿಡಿಯೋ ಇರುವ ಸಿಡಿಯಿದೆ. ಹೀಗಾಗಿ ಕೂಡಲೇ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ವರಿಷ್ಠರ ಸೂಚನೆಯಂತೆ ಮೊರೆ: ಹೈಕಮಾಂಡ್ ಸೂಚನೆಯಂತೆ ಕೋರ್ಟ್ಗೆ ಹೋಗಲಾಗಿದೆ. ಹೀಗಾಗಿ ಈ ಬಗ್ಗೆ ಬಿಜೆಪಿ ವರಿಷ್ಠರಿಗೂ ಇದು ಗೊತ್ತಿದೆ. ಹೀಗಾಗಿ ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಕೂಡಲೇ ಸಚಿವರು ರಾಜೀನಾಮೆ ನೀಡಬೇಕು. ಇಲ್ಲವಾದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.