ಕೋರ್ಟ್ಗೆ ಹೋಗಲ್ಲ, ಸಿಡಿ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ಶಾಸಕ ಮುನಿರತ್ನ
ಬೆಂಗಳೂರು, ಮಾ. 7: ‘ನನ್ನ ಬಗ್ಗೆ ಏನಾದರೂ ಸಿಡಿ ಇದ್ದರೆ ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಿ. ನನಗೆ ಯಾವುದೇ ಸಿಡಿ ಭಯವೂ ಇಲ್ಲ. ನಾನು ನ್ಯಾಯಾಲಯದ ಮೆಟ್ಟಿಲನ್ನು ಏರುವುದಿಲ್ಲ' ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನನಗೆ ಯಾವುದೇ ಸಿಡಿಯ ಆತಂಕವೂ ಇಲ್ಲ. ರಾಜಕೀಯದಲ್ಲಿ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾಗಿದೆ. ಯಾವುದೇ ಕಾರಣಕ್ಕೆ ಕೋರ್ಟ್ ಮೆಟ್ಟಿಲು ಹತ್ತಲ್ಲ. ನನ್ನ ಬಗ್ಗೆ ಸಿಡಿ ಇದ್ದರೆ ಬಿಡುಗಡೆ ಮಾಡಲಿ' ಎಂದು ಇದೇ ವೇಳೆ ಸವಾಲು ಹಾಕಿದರು.
‘ಕೆಲ ಸಚಿವರು ಮುನ್ನಚ್ಚರಿಕೆ ಕ್ರಮವಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ಕೋರ್ಟ್ ಮೆಟ್ಟಿಲು ಏರುವುದಿಲ್ಲ. ನಾವು ಎಲ್ಲರೂ ಮುಂಬೈ, ಪುಣೆಯಲ್ಲಿ ಒಟ್ಟಿಗೆ ಇದ್ದೇವು. ಒಂದೇ ರೆಸಾರ್ಟ್ ನಲ್ಲಿ ಇದ್ದೇವು. ಅಲ್ಲಿ ನಮಗೆ ತೇಜೋವಧೆ ಮಾಡುವ ಕೆಲಸ ಯಾರೂ ಮಾಡಿಲ್ಲ' ಎಂದು ಮುನಿರತ್ನ ಸ್ಪಷ್ಟನೆ ನೀಡಿದರು.
‘ವ್ಯವಸ್ಥಿತ ಸಂಚು ರೂಪಿಸಿ ಕೆಲವರನ್ನು ಸಿಲುಕಿಸಬೇಕು ಎಂದೇ ಮಾಡಿರುವ ಕೆಲಸವಿದು. ಅವರ ದೌರ್ಬಲ್ಯ ಯಾರಿಗೆ ಗೊತ್ತಿತ್ತೋ, ಅವರೇ ಅದನ್ನು ಬಳಸಿಕೊಂಡು ಸಿಲುಕಿಸಿದ್ದಾರೆ ಎಂದ ಮುನಿರತ್ನ, ಯಾರೋ ಗೊತ್ತಿಲ್ಲದ ವ್ಯಕ್ತಿಗಳಿಂದ ಇಂತಹ ಕೃತ್ಯ ನಡೆಸಲು ಸಾಧ್ಯವಿಲ್ಲ. ಗೊತ್ತಿರುವ ವ್ಯಕ್ತಿಗಳೇ ಮಾಡಿರುವ ಸಾಧ್ಯತೆಗಳಿವೆ' ಎಂದರು.