"ಮಾನಹಾನಿಕರ ಸುದ್ದಿ ಬಿತ್ತರಿಸದಂತೆ ತಡೆ ಕೋರಿ ಯಾವುದೇ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸುವುದಿಲ್ಲ"
ಸಚಿವ ಎಂ.ಟಿ.ಬಿ.ನಾಗರಾಜ್
ಬೆಂಗಳೂರು: ‘ಆಕ್ಷೇಪಾರ್ಹ ಮತ್ತು ಮಾನಹಾನಿಕರ ಸುದ್ದಿ ಬಿತ್ತರಿಸದಂತೆ ತಡೆ ಕೋರಿ ಯಾವುದೇ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸುವುದಿಲ್ಲ. ನನಗೆ ಅಂತಹ ಯಾವುದೇ ಆತಂಕವೂ ಇಲ್ಲ' ಎಂದು ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂ.ಟಿ.ಬಿ.ನಾಗರಾಜ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನ್ಯಾಯಾಲಯಕ್ಕೆ ಹೋಗುವ ವಿಚಾರದ ಬಗ್ಗೆ ನಾನು ಯಾರ ಜತೆಗೂ ಚರ್ಚೆ ಮಾಡಿಲ್ಲ. ಸಚಿವ ಎಸ್.ಟಿ.ಸೋಮಶೇಖರ್ ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದು ಸರಿಯಾದ ಕ್ರಮವಲ್ಲ' ಎಂದು ನಿರಾಕರಿಸಿದರು.
‘ತಮ್ಮ ವಿರುದ್ಧ ಆಕ್ಷೇಪಾರ್ಹ ಸುದ್ದಿ ಬಿತ್ತರಿಸುವುದರ ಸಂಬಂಧ ಸಚಿವ ಸೋಮಶೇಖರ್ ಅವರು ಎಷ್ಟರ ಮಟ್ಟಿಗೆ ಮಾಹಿತಿ ಕಲೆ ಹಾಕಿದ್ದಾರೋ ನನಗೆ ಅದು ಗೊತ್ತಿಲ್ಲ. ಕೋರ್ಟ್ ಮೆಟ್ಟಿಲೇರಿರುವವರ ಬಗ್ಗೆ ಅವರ ಬಳಿಯೇ ಕೇಳಬೇಕು. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅಲ್ಲದೆ, ಸಿಡಿಗಳನ್ನು ಕಾಂಗ್ರೆಸ್ ಮಾಡಿದ್ದಾರೆಂಬ ಬಗ್ಗೆಯೂ ನನಗೆ ಗೊತ್ತಿಲ್ಲ' ಎಂದು ಹೇಳಿದರು.