ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಗುಂಡ್ಲುಪೇಟೆ,ಮಾ10: ತಾಲೂಕಿನ ಕುನಗಹಳ್ಳಿ ಗ್ರಾಮದಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆಯಾಗಿದೆ.
ಬಂಡೀಪುರ ಹುಲಿಯೋಜನೆಯ ಗೋಪಾಲಸ್ವಾಮಿಬೆಟ್ಟ ವಲಯದ ಕಾಡಂಚಿನ ಗ್ರಾಮದಲ್ಲಿ ಚಿರತೆಯೊಂದು ಕಳೆದ ಒಂದು ವಾರದಿಂದ ಗ್ರಾಮದ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿತ್ತು. ಶಿವಪ್ಪ ಎಂಬುವರ ಎರಡು ಕರುಗಳನ್ನು ತಿಂದುಹಾಕಿತ್ತು. ಇದರಿಂದ ಈ ಭಾಗದ ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗ್ರಾಮದ ಮಂಜಪ್ಪ ಎಂಬುವರ ಜಮೀನಿನಲ್ಲಿ ಬೋನಿನ ಒಳಗೆ ನಾಯಿಯನ್ನು ಇರಿಸಿತ್ತು. ನಾಯಿಯನ್ನು ತಿನ್ನಲು ಬಂದು ಸೆರೆಯಾದ 5 ವರ್ಷದ ಗಂಡು ಚಿರತೆಯನ್ನು ಅರಣ್ಯಪ್ರದೇಶಕ್ಕೆ ಬಿಡಲಾಗಿದೆ ಎಂದು ಆರ್ ಎಫ್ ಒ ಎನ್.ಪಿ.ನವೀನ್ ಕುಮಾರ್ ಹೇಳಿದರು.
Next Story