ಡ್ರಗ್ಸ್ ಜಾಲ ಪ್ರಕರಣ: ವಿಚಾರಣೆಗೆ ಹಾಜರಾಗಲು ತೆಲುಗು ನಟ ತನೀಶ್ಗೆ ನೋಟಿಸ್ ಜಾರಿ
ಬೆಂಗಳೂರು, ಮಾ.12: ಡ್ರಗ್ಸ್ ಜಾಲ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಗೋವಿಂದಪುರ ಪೊಲೀಸರು ನಿರ್ಮಾಪಕ ಶಂಕರೇಗೌಡ ಆಯೋಜಿಸುತ್ತಿದ್ದ ಎನ್ನಲಾದ ತಡರಾತ್ರಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪದಡಿ ತೆಲುಗು ನಟ ತನೀಶ್ ಸೇರಿ ಐದು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ತೆಲುಗು ನಟ ತನೀಶ್, ಓರ್ವ ಉದ್ಯಮಿ, ನಿರ್ಮಾಪಕ ಸೇರಿದಂತೆ ಐವರಿಗೆ ಖುದ್ದು ಗೋವಿಂದಪುರ ಠಾಣೆ ಇನ್ಸ್ಪೆಕ್ಟರ್ ಆರ್.ಪ್ರಕಾಶ್ ಹೈದರಾಬಾದ್ ತೆರಳಿ ಮಾ.13ರಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವಿದೇಶಿ ಡ್ರಗ್ಸ್ ಪೆಡ್ಲರ್ ನೊಂದಿಗೆ ಸಂಪರ್ಕದಲ್ಲಿದ್ದ ಶಂಕರೇಗೌಡ ತಮ್ಮ ನಿವಾಸದಲ್ಲಿ ತಡ ರಾತ್ರಿ ಪಾರ್ಟಿ ಆಯೋಜಿಸಿ ತೆಲುಗು ನಟ ತನೀಶ್ ಸೇರಿ ಹಲವರನ್ನು ಆಹ್ವಾನಿಸುತ್ತಿದ್ದರು ಎನ್ನಲಾಗಿದೆ.
ಸಂಜಯನಗರದ ಶಂಕರೇಗೌಡ ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಲ್ಲಿ ಆರೋಪಿಗಳಾದ ಮಸ್ತಾನ್ ಹಾಗೂ ವಿಕ್ಕಿ ಮಲ್ಹೋತ್ರ ಆಹ್ವಾನದಂತೆ ಬೆಂಗಳೂರಿಗೆ ತಡರಾತ್ರಿ ಪಾರ್ಟಿಗೆ ಬರುತ್ತಿದ್ದರು. ಡ್ರಗ್ಸ್ ಪೆಡ್ಲರ್ ಗಳಾದ ಫಯೂಮ್ ಹಾಗೂ ಜಾನ್ನಿಂದ ಮಸ್ತಾನ್ ಚಂದ ಪಡೆಯುತ್ತಿದ್ದ ಡ್ರಗ್ಸ್ ನ್ನು ಹೆಚ್ಚಿನ ಬೆಲೆಗೆ ತನೀಶ್ಗೆ ಪೆಡ್ಲಿಂಗ್ ನಡೆಸಿರುವ ಶಂಕೆ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿ ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.