ಬಡವರಿಗೆ ಉಚಿತ ಮರಳು ನೀಡಲು ಶೀಘ್ರದಲ್ಲೆ ಮರಳು ನೀತಿ ಜಾರಿ: ಸಚಿವ ಮುರುಗೇಶ್ ನಿರಾಣಿ
ಬೆಂಗಳೂರು, ಮಾ. 19: ‘ರಾಜ್ಯದಲ್ಲಿನ ಬಡವರಿಗೆ ಮನೆ ನಿರ್ಮಿಸಲು ಉಚಿತ ಮತ್ತು ಅತ್ಯಂತ ಸುಲಭವಾಗಿ ಮರಳು ಸಿಗುವಂತಾಗಲು ಶೀಘ್ರದಲ್ಲೆ ಮರಳು ನೀತಿಯನ್ನು ಜಾರಿಗೆ ತರಲಾಗುವುದು' ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಸಿ.ಎನ್.ಬಾಲಕೃಷ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿನ ಮರಳು ಅಭಾವ ನೀಗಿಸಲು ತಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಹಲವು ಕ್ರಮಗಳನ್ನು ಕೈಗೊಂಡಿದ್ದೇನೆ. 10 ಲಕ್ಷ ರೂ.ಒಳಗಿನ ಮನೆ ನಿರ್ಮಿಸುವ ಬಡವರಿಗೆ ಟನ್ಗೆ 100 ರಿಂದ 200 ರೂ.ದರದಲ್ಲಿ ಮರಳು ನೀಡುವ ಉಚಿತ ಮರಳು ನೀತಿಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು
10 ಲಕ್ಷ ರೂ.ಗಳ ಒಳಗೆ ಆಶ್ರಯ ಮತ್ತಿತರ ಯೋಜನೆಯಡಿ ಗ್ರಾ.ಪಂ.ನಿಂದ ಹಿಡಿದ ನಗರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುವ ಎಲ್ಲ ಬಡವರಿಗೂ ಒಳ್ಳೆಯ ಗುಣಮಟ್ಟದ ಮರಳನ್ನು ಈ ಯೋಜನೆಯಡಿ ಒದಗಿಸಲಾಗುವುದು ಎಂದ ಅವರು, ಸಮರ್ಪಕವಾಗಿ ಮರಳನ್ನು ಒದಗಿಸಲು ಹೊಸ ಮರಳು ನೀತಿಯನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು.
ಅದರಂತೆ ಹಳ್ಳ, ತೊರೆ ಹಾಗೂ ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾ.ಪಂ.ಗಳ ಮೂಲಕ ವಿಲೇವಾರಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 193 ಮರಳು ನಿಕ್ಷೇಪದ ಪ್ರದೇಶಗಳನ್ನು ಗುರುತಿಸಿ ಈ ಪೈಕಿ 87 ಬ್ಲಾಕ್ಗಳಿಗೆ ಅಧಿಸೂಚನೆ ಹೊರಡಿಸಿ ಕಾರ್ಯಾದೇಶ ನೀಡಲಾಗಿದೆ ಎಂದ ಅವರು, 4, 5 ಮತ್ತು 6ನೆ ಶ್ರೇಣಿಯ ಹೊಳೆ, ನದಿ, ಅಣೆಕಟ್ಟು, ಜಲಾಶಯ, ಬ್ಯಾರೇಜ್ ಹಾಗೂ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಲಭ್ಯವಿರುವ ಮರಳನ್ನು ತೆಗೆಯಲು ಸರಕಾರಿ ಸ್ವಾಮ್ಯ ಸಂಸ್ಥೆಯಾದ ಕರ್ನಾಟಕ ರಾಜ್ಯ ಮಿನರಲ್ ಕಾರ್ಪೋರೇಷನ್ ಮತ್ತು ಹಟ್ಟಿ ಚಿನ್ನದ ಗಣಿ ನಿಯಮಿತ ಇವರಿಗೆ ವಹಿಸಲಾಗಿದೆ ಎಂದರು.
ಕಠಿಣ ಕ್ರಮ: ಫಿಲ್ಟರ್ ಮರಳನ್ನು ತಯಾರಿಸುವವರ, ಕಾಳಸಂತೆಯಲ್ಲಿ ಮರಳು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧವೂ ಇಲಾಖೆ ಕ್ರಮ ಕೈಗೊಂಡಿದೆ ಎಂದ ಅವರು, ಎಲ್ಲರಿಗೂ ಸುಲಭವಾಗಿ ಮರಳನ್ನು ಒದಗಿಸಲು ಸರಕಾರ ಕ್ರಮ ಕೈಗೊಂಡಿದೆ. ಜೊತೆಗೆ ಸರಕಾರಕ್ಕೆ ರಾಜಸ್ವ ವಸೂಲಿಗೂ ಕ್ರಮ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.