ಸಕಲೇಶಪುರ: ಮಸೀದಿಗೆ ತೆರಳುತ್ತಿದ್ದಾಗ ಧರ್ಮಗುರುವಿನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಸಕಲೇಶಪುರ, ಮಾ.21: ತಾಲೂಕಿನ ಸುಂಡೆಕೆರೆ ಗ್ರಾಮದ ಮಸೀದಿಯ ಧರ್ಮಗುರು ಒಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ರವಿವಾರ ಸಂಜೆ ನಡೆದಿದೆ.
ಅಬ್ದುಲ್ ನಾಸಿರ್ ದಾರಿಮಿ (29) ಹಲ್ಲೆಗೊಳಗಾಗಿರುವ ಧರ್ಮಗುರು.
ತನ್ನ ಮನೆಯಿಂದ ಮಸೀದಿ ಕಡೆಗೆ ಕಾಲ್ನಡಿಗೆಯಲ್ಲಿ ಬರುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳು ನಾಸಿರ್ ದಾರಿಮಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಇವರ ಮಂಡಿ, ಬಲಗಾಲು ಹಾಗೂ ಬೆನ್ನಿಗೆ ಗಾಯಗಳಾಗಿವೆ ಎನ್ನಲಾಗಿದೆ.
ಘಟನೆ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಅಬ್ದುಲ್ ನಾಸಿರ್ ದಾರಿಮಿ, ನಾಲ್ವರು ಆಲ್ಟೊ ಕೆಂಪು ಬಣ್ಣದ ಕಾರಿನಲ್ಲಿ ಕುಳಿತಿದ್ದರು. ಅದರಲ್ಲಿ ಒಬ್ಬ ವ್ಯಕ್ತಿ ನನ್ನ ಬಳಿ ಬಂದು ನೀನು ಯಾರು, ಯಾವ ಊರು ಎಂದು ಪ್ರಶ್ನಿಸಿದರು. ನಾನು ಇದೇ ಗ್ರಾಮದ ಮಸೀದಿಯ ಧರ್ಮಗುರು ಎಂದು ಹೇಳಿದೆ. ನಂತರ ನಿನ್ನ ಗುರುತಿನ ಪತ್ರ ಕೊಡು ಎಂದು ಕೇಳಿ ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದರು. ಕಾರಿನಲ್ಲಿದ್ದ ಇತರ ಮೂವರು ಸಹ ಬಂದು ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ತಿಳಿಸಿದರು.
ಗ್ರಾಮಾಂತರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.