ಅಕ್ರಮ ಸ್ಫೋಟಕ ಸಂಗ್ರಹ ಗೋದಾಮುಗಳ ಮೇಲೆ ಪೊಲೀಸರ ದಾಳಿ: ಅಪಾರ ಪ್ರಮಾಣದ ಸ್ಫೋಟಕ ಪತ್ತೆ
ದಾವಣಗೆರೆ, ಮಾ.22: ಅಕ್ರಮವಾಗಿ ಸ್ಫೋಟಕ ವಸ್ತು ಸಂಗ್ರಹ ಮಾಡಿರುವ ಗೋದಾಮುಗಳ ಮೇಲೆ ದಾವಣಗೆರೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ದಾವಣಗೆರೆ ತಾಲೂಕಿನ ಕಾಡಜ್ಜಿಯಲ್ಲಿ ಪತ್ತೆಯಾದ ಸ್ಫೋಟಕಗಳಿಗೆ ರಾಯಚೂರು ಜಿಲ್ಲೆಯ ಮಾನ್ವಿಯ ಸಂಬಂಧ ಇರುವುದನ್ನ ಪೊಲೀಸರು ಪತ್ತೆ ಮಾಡಿದ್ದಾರೆ.
ನಿನ್ನೆಯಷ್ಟೇ ಕಾಡಜ್ಜಿಯ ಷಣ್ಮುಖಪ್ಪ ಎಂಬವರ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳನ್ನು ವಶಪಡಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ವಿಚಾರಿಸಿದಾಗ ಮಾನ್ವಿಯಿಂದ ಸ್ಫೋಟಕ ಪೂರೈಕೆಯಾಗಿರುವುದು ಗೊತ್ತಾಗಿದೆ. ಈ ಮಾಹಿತಿ ಮೇರೆಗೆ ಮಾನ್ವಿಗೆ ತೆರಳಿ ಅಲ್ಲಿ ಪರಿಶೀಲನೆ ನಡೆಸಿದ ದಾವಣಗೆರೆ ಪೊಲೀಸರಿಗೆ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಗಿದೆ.
ಮಾನ್ವಿಯ ಶೇಖ್ ಮುಜಾಹಿದ್ ಸಿದ್ಧೀಕಿಯನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದ್ದು, ಇವರು ದಾವಣಗೆರೆಯ ವಿಕ್ರಮ್ ಎಂಬವರಿಗೆ ಸ್ಫೋಟಕಗಳನ್ನು ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ, ಅಲ್ಲಿ ಸಂಗ್ರಹಿಸಲಾಗಿದ್ದ 1 ಲಕ್ಷ ರೂ. ಮೌಲ್ಯದ 10,000 ಜಿಲಿಟಿನ್ ಕಡ್ಡಿಗಳ ಬಾಕ್ಸ್, 1 ಲಕ್ಷ ಬೆಲೆ ಬಾಳುವ ಎಲೆಕ್ಟ್ರಾನಿಕ್ ಡಿಟೋನೇಟರ್ ಹಾಗೂ 67 ಸಾವಿರ ರೂ. ಮೌಲ್ಯದ 750 ಗ್ರಾಂ ಅಮೋನಿಯಮ್ ನೈಟ್ರೇಟ್ ಪೌಡರ್ ಸೇರಿ ಒಟ್ಟು 2.76 ಲಕ್ಷ ರೂ. ಮೌಲ್ಯದ ಸ್ಫೋಟಕವನ್ನ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ದಾವಣಗೆರೆ ಗ್ರಾಮಾಂತರ ಡಿವೈ ಎಸ್ಪಿ ನರಸಿಂಹ ತಾಮ್ರದ್ವಜ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.