ವಕೀಲರ ಮನವಿಗೆ ಸ್ಪಂದಿಸಿ ವಾಹನ ನೀಡಿದ್ದೆ: ಮುಹಮ್ಮದ್ ನಲಪಾಡ್ ಸ್ಪಷ್ಟನೆ
ಬೆಂಗಳೂರು, ಮಾ.31: ಗುರುನಾನಕ್ ಭವನದಲ್ಲಿರುವ ವಿಶೇಷ ನ್ಯಾಯಾಲಯದ ಬಳಿ ನಾವು ನಿನ್ನೆ ಹೋಗಿದ್ದಾಗ ವಕೀಲರು ನನ್ನ ಬಳಿ ಬಂದು ಒಂದು ವಾಹನ ಬೇಕು ಎಂದು ಕೇಳಿದಾಗ, ನನ್ನ ಸ್ನೇಹಿತನ ವಾಹನ ಹಾಗೂ ಚಾಲಕನನ್ನು ವಕೀಲರಿಗಾಗಿ ನೀಡಿದೆ. ಆದರೆ, ಇವತ್ತು ಕೆಲವು ಮಾಧ್ಯಮಗಳಲ್ಲಿ ‘ಸಿಡಿ’ ಯುವತಿ ನಲಪಾಡ್ ಗಾಡಿಯಲ್ಲಿ ಪ್ರತ್ಯಕ್ಷ ಎಂದು ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಮುಹಮ್ಮದ್ ಹಾರೀಸ್ ನಲಪಾಡ್ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಾಕಿರುವ ಅವರು, ಸಂತ್ರಸ್ತ ಮಹಿಳೆಗೆ ಸುರಕ್ಷತೆ ಬೇಕು, ನೈತಿಕ ಸ್ಥೈರ್ಯ ಕೊಡಬೇಕು ಎಂಬ ಉದ್ದೇಶದಿಂದ ನಿನ್ನೆ ನಾನು, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸದಸ್ಯರು ನ್ಯಾಯಾಲಯಕ್ಕೆ ಬಂದಿದ್ದೆವು. ಆನಂತರ, ಗುರುನಾನಕ್ ಭವನದಲ್ಲಿರುವ ವಿಶೇಷ ನ್ಯಾಯಾಲಯದ ಬಳಿಗೂ ನಾವು ತೆರಳಿದ್ದೆವು ಎಂದು ತಿಳಿಸಿದ್ದಾರೆ.
ನಾಳೆ ಆ ಯುವತಿ ತನಗಾಗಿ ವಾಹನ ಬೇಕು ಎಂದು ಕೇಳಿದರೆ ಅವರಿಗೆ ಸಹಾಯ ಮಾಡುತ್ತೇವೆ. ಆಕೆಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದಲೆ ನಾವು ಅಲ್ಲಿಗೆ ಬಂದದ್ದು. ಅದರಲ್ಲಿ ಯಾವುದೆ ತಪ್ಪು, ದುರುದ್ದೇಶ ಇಲ್ಲ. ನಲಪಾಡ್ಗೂ ಆ ಯುವತಿಗೂ ಯಾವುದೇ ಸಂಬಂಧವಿಲ್ಲ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ನಮ್ಮ ಧರ್ಮ. ಅದನ್ನು ಮುಂದೆಯೂ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ವಿಷಯದ ಗಂಭೀರತೆಯನ್ನು ಅರಿಯಬೇಕು, ದಿಕ್ಕನ್ನು ತಪ್ಪಿಸುವ ಕೆಲಸ ಮಾಡುವುದು ಬೇಡ. ಆ ಯುವತಿಯ ಹೇಳಿಕೆ ಆಧರಿಸಿ ಆರೋಪಿಯ ಬಂಧನವಾಗಬೇಕು. ಆ ನಿಟ್ಟಿನಲ್ಲಿ ಆಲೋಚಿಸಬೇಕು. ಅದನ್ನು ಬಿಟ್ಟು ಆ ಯುವತಿ ಯಾವ ವಾಹನದಲ್ಲಿ ಬಂದರು ಎಂಬುದು ಮುಖ್ಯ ಅಲ್ಲ. ಆ ಯುವತಿಗೆ ನ್ಯಾಯ ಸಿಗಲಿ ಎಂದು ಮನವಿ ಮಾಡುತ್ತೇವೆ ಎಂದು ಮುಹಮ್ಮದ್ ಹಾರೀಸ್ ನಲಪಾಡ್ ತಿಳಿಸಿದ್ದಾರೆ.