ಶಾಸಕ ಯತ್ನಾಳ್ ನಟ ಹುಚ್ಚ ವೆಂಕಟ್ ಇದ್ದಂತೆ: ಪರಿಷತ್ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್
ಬೆಂಗಳೂರು, ಎ.1: ‘ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಶಾಸಕ ಹಾಗೂ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಟ ಹುಚ್ಚ ವೆಂಕಟ್ ಇದ್ದಂತೆ' ಎಂದು ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆತ್ಮರತಿಯ ವ್ಯಕ್ತಿಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಚಾರಪ್ರಿಯರು. ತಮ್ಮನ್ನು ತಾವು ನಾಯಕ ಎಂದುಕೊಂಡಿದ್ದಾರೆ. ಒಂದು ಕಾಲದಲ್ಲಿ ಹುಚ್ಚ ವೆಂಕಟ್ಗೆ ಪ್ರಚಾರ ಸಿಕ್ಕಿತ್ತು. ಯತ್ನಾಳ್ ಅವರಿಗೂ ಪ್ರಚಾರ ಸಿಗುತ್ತಿದೆ. ಪ್ರಚಾರದಿಂದ ಯಾರೂ ನಾಯಕರಾಗುವುದಿಲ್ಲ ಎಂದು ಇದೇ ವೇಳೆ ಟೀಕಿಸಿದರು.
ನಟ ಹುಚ್ಚ ವೆಂಕಟ್ ಒಮ್ಮೆ ಕಾರಿಗೆ ಕಲ್ಲು ಹೊಡೆದಿದ್ದರು. ಯತ್ನಾಳ್ ಪಕ್ಷಕ್ಕೆ ಕಲ್ಲು ಹೊಡೆಯುತ್ತಿದ್ದಾರೆ. ಗಾಳಿಪಟ ಎಷ್ಟು ಎತ್ತರಕ್ಕೆ ಹಾರಾಡಿದರೂ ಕೈಯಲ್ಲೇ ಸೂತ್ರ ಇರುತ್ತದೆ. ದಾರವನ್ನು ಸುತ್ತಿ ಕೆಳಗಿಳಿಸುವುದು ಪಕ್ಷಕ್ಕೆ ಗೊತ್ತಿದೆ. ಗೂಳಿ ಮಿತಿಮೀರಿ ಸುತ್ತಾಡಿದಾಗ ಹಗ್ಗದಿಂದ ಗೂಟಕ್ಕೆ ಕಟ್ಟಿ ಹಾಕುವುದು ಪಕ್ಷಕ್ಕೆ ಗೊತ್ತಿದೆ ಎಂದು ಆಯನೂರು ಮಂಜುನಾಥ್ ಎಚ್ಚರಿಕೆ ನೀಡಿದರು.