ಅಂಬೇಡ್ಕರ್ ರನ್ನು ಈಗಲೂ ದಲಿತ ನಾಯಕ ಎಂದು ಪ್ರತಿಬಿಂಬಿಸುವ ಹುನ್ನಾರ ನಡೆಯುತ್ತಿದೆ: ನ್ಯಾ. ನಾಗಮೋಹನ್ ದಾಸ್
ಮೈಸೂರು,ಎ.3: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ದಲಿತರಿಗಷ್ಟೇ ಅಲ್ಲ, ದೇಶ ಶೆ.60 ರಷ್ಟು ದುಡಿಯುವ ವರ್ಗದ ಪರ ಹೋರಾಟ ಮಾಡಿದ್ದರೂ ಅವರನ್ನು ಇವತ್ತಿಗೂ ದಲಿತ ನಾಯಕ ಎಂದು ಪ್ರತಿಬಿಂಬಿಸುವ ಹುನ್ನಾರ ಈ ದೇಶದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಒಡನಾಡಿ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮಾನಸ ಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನೊಂದ ಮಹಿಳೆಯರ ಧ್ವನಿಯಾಗಿ ಅಂಬೇಡ್ಕರ್ ಮತ್ತು ಸ್ಟ್ಯಾನ್ಲಿ ಪರಶು ಅವರ “ಒಡನಾಡಿಯ ಒಡಲಾಳ” ಪುಸ್ತಕವನ್ನು ಬಿಡುಗಡೆ ಮಾಡಿ ವರ್ಚುವಲ್ ಭಾಷಣ ಮಾಡಿದರು.
ನೊಂದ ಮಹಿಳೆಯರ ಧ್ವನಿಯಾದ ಅಂಬೇಡ್ಕರ್ ಅವರನ್ನು ಇವತ್ತಿಗೂ ಕೂಡ ದಲಿತ ಮುಖಂಡರು ದಲಿತರ ಪರ ಧ್ವನಿ ಎತ್ತಿದವರು, ಅವರೊಬ್ಬ ದಲಿತರ ನಾಯಕ ಎಂದು ಪ್ರತಿಬಿಂಬಿಸುವ ಹುನ್ನಾರ ಈ ದೇಶದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಅಂಬೇಡ್ಕರ್ ದಲಿತರ ಹಿತ ಕಾಪಾಡಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ, ಇಡೀ ದೇಶದಲ್ಲಿ ಗುಲಾಮರಂತೆ ಇದ್ದ ದಲಿತ ಸಮುದಾಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸಿ ಬಾಯಿಲ್ಲದವರಿಗೆ ಮಾತನ್ನು ನೀಡಿ, ಧೈರ್ಯ ಸ್ಥೈರ್ಯ ತುಂಬಿ ನ್ಯಾಯಕ್ಕಾಗಿ, ಸ್ವಾಭಿಮಾನಕ್ಕಾಗಿ ಹೋರಾಡುವ ಕಿಚ್ಚನ್ನು ಹತ್ತಿಸಿದವರು. ಅದೇ ರೀತಿ ಅವರು ಈ ದೇಶದ ಶೇ.60 ರಷ್ಟು ದುಡಿಯುವ ವರ್ಗದ ಜನರ ಹಿತ ಕಾಪಾಡಿದ ಮಹಾನ್ ನಾಯಕ ಎಂದು ಹೇಳಿದರು.
1942 ರಿಂದ 1946 ವರೆಗೆ ವೈಸ್ ರಾಯ್ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿ ಮಹಾನ್ ಸುಧಾರಣೆ ತಂದಿದ್ದಾರೆ. ಭಾರತದ ದೇಶ ಕಾರ್ಮಿಕ ವರ್ಗ ಏನಾದರೂ ಹಕ್ಕುಗಳನ್ನು ಅನುಭವಿಸುತ್ತಿದ್ದರೆ ಅದರ ಹಿಂದೆ ಅಂಬೇಡ್ಕರ್ ಅವರ ಮಹಾನ್ ಕೊಡುಗೆ ಇದೆ ಎಂಬುದನ್ನು ಈ ದೇಶದ ಕಾರ್ಮಿಕ ವರ್ಗ ಮರೆಯಬಾರದು ಎಂದು ಹೇಳಿದರು.
ಈ ದೇಶದ ಅರ್ಧದಷ್ಟು ಮಹಿಳೆಯರನ್ನು ಎರಡನೇ ದರ್ಜೆಯಾಗೆ ನಡೆಸಿಕೊಳ್ಳಲಾಗುತ್ತಿತ್ತು. ಯಾವುದೇ ಆಸ್ತಿಯಲ್ಲಿ ಹಕ್ಕು ನೀಡುತ್ತಿರಲಿಲ್ಲ, ಪುರುಷನ ಸಮಾನನಾದ ಅಧಿಕಾರದಲ್ಲಿ ಭಾಗವಹಿಸುವ ಅವಕಾಶ ನೀಡುತ್ತಿರಲಿಲ್ಲ. ಆದರೆ ಅಂಬೇಡ್ಕರ್ ಅವರು ಮಹಿಳಾ ಸಮಸ್ಯೆ, ಮದುವೆ, ವಿಚ್ಚೇಧನ, ಮಕ್ಕಳ ದತ್ತು, ಮಕ್ಕಳ ರಕ್ಷಣೆ, ಆಕೆಗೆ ಜೀವನಾಂಶ ಮತ್ತು ವಾರಸುದಾರಿಕೆ ಪರ ಹೋರಾಟ ಮಾಡಿದರು. ಈ ದೇಶಕ್ಕೆ ಸಂವಿಧಾನ ನೀಡಿ ಸಮಾನತೆಯನ್ನು ತಂದು ಕೊಟ್ಟ ಮಹಾನ್ ನಾಯಕರಾದರು ಎಂದು ಹೇಳಿದರು.
ಈ ದೇಶದಲ್ಲಿನ ನೊಂದವರ, ಶೋಷಿತರ, ಕಾರ್ಮಿಕರ, ದಲಿತರ ಮತ್ತು ಮಹಿಳೆಯ ಹಿತಕ್ಕಾಗಿ ಅಂದು ಅಂಬೇಡ್ಕ್ ಪಾರ್ಲಿಮೆಂಟ್ನಲ್ಲಿ ಹಿಂದೂ ಕೋಡ್ ಬಿಲ್ ಮಂಡಿಸಿದರು. ಆದರೆ ಅವರ ಪಕ್ಷವೇ ಬಹುತ ಇದ್ದರೂ ಬಿಲ್ ಪಾಸ್ ಮಾಡಲಿಲ್ಲ. ಇದರಿಂದ ನೊಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದ ಏಕೈಕ ಮಹಾನ್ ನಾಯಕ ಎಂದರೆ ಅಂಬೇಡ್ಕರ್.
ಆದರೆ ಇಂದು ಸಚಿವರುಗಳು ಭ್ರಷ್ಟಾಚಾರ, ಸಿಡಿ ಪ್ರಕರಣ, ಅನಾಗರೀಕ ಭಾಷೆ, ಅತಿರೇಖದಲ್ಲಿ ತೊಡಗಿ ರಾಜೀನಾಮೆ ನೀಡುತ್ತಿದ್ದಾರೆ. ಯಾವೊಬ್ಬ ಸಚಿವರು ದಲಿತರು ಮಹಿಳೆಯರ ಮತ್ತು ಕಾರ್ಮಿಕರ ಹಿತ ಕಾಪಾಡಲು ರಾಜೀನಾಮೆ ಕೊಟ್ಟ ಉದಾಹರಣೆಯೇ ಇಲ್ಲ ಎಂದು ಕಿಡಿಕಾರಿದರು.
ಈ ದೇಶದಲ್ಲಿ ಮಹಿಳೆಯರು ಪ್ರಧಾನಿ, ರಾಷ್ಟ್ರಪತಿ, ಕೇಂದ್ರ ಮಂತ್ರಿಗಳು, ಸಂಸದರು, ಶಾಸಕರುಗಳು, ಜಿ.ಪಂ., ತಾ.ಪಂ ಸದಸ್ಯರುಗಳಾಗಿ ಪುರುಷ ಸಮಾನರಾಗಿ ಇದ್ದಾರೆ ಎಂದರೆ ಅದು ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂದ ಅವರು, ಇಷ್ಟೆಲ್ಲಾ ಇದ್ದರೂ ದೇಶದಲ್ಲಿ ಮಹಿಳೆಯರು ಅನೇಕ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.ಪುರುಷರಿಗೆ ಶೇ. 82 ಶಿಕ್ಷಣ ಇದ್ದರೆ. ಮಹಿಳೆಯರಿಗೆ ಶೆ.65ರಷ್ಟು ಶಿಕ್ಷಣೆ ಇದೆ. ಮೂರನೆ ಒಂದು ಭಾಗದಷ್ಟು ಮಹಿಳೆಯರು ಅಪೌಷ್ಠಿಕತೆಯಿಂದ, ಶೆ.50 ರಕ್ತ ಹೀನತೆ, ಶೇ.15 ರಷ್ಟು ಮಾನಸಿಕ ರೋಗ ವರದಕ್ಷಿಣೆ,ಬಾಲ್ಯವಿವಾಹದಂತಹ ಸಮಸ್ಯೆ ಎದುರಿಸುತ್ತಿದ್ದಾರೆ. ಅತ್ಯಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಪರಿಸ್ಥಿತಿಯನ್ನು ಬದಲಾಯಿಸಬೇಕು ಎಂದರೆ ಪ್ರತಿಯೊಬ್ಬರು ಸಂವಿಧಾನವನ್ನು ಓದಬೇಕು. ಇದನ್ನು ಅರ್ಥಮಾಡಿಕೊಳ್ಳಬೇಕು, ಜೊತೆಗೆ ಅನುಷ್ಠಾನಕ್ಕೆ ತಂದಾಗ ಮಾತ್ರ ಇದೆಲ್ಲವನ್ನು ದೂರ ಮಾಡಬಹುದು ಎಂದು ಹೇಳಿದರು.
ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಂಬೇಡ್ಕ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಮೈಸೂರು ವಿವಿ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ, ಬಂತೇಜಿ, ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ, ನರೇಂದ್ರ, ಕೃತಿ ಕತೃ ಸ್ಟ್ಯಾನ್ಲಿ, ಪರಶು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಅಂಬೇಡ್ಕರ್ ಸಂಶೋಧನಾ ಕೇಂದ್ರದ ಪದ್ಮಶ್ರೀ ನಡೆಸಿಕೊಟ್ಟರು.
ನಾನು ಪಕ್ಷಾಂತರಿಯಾಗಿದ್ದರೂ ತತ್ವಾಂತರಿಯಾಗಿಲ್ಲ: ಸಂಸದ ವಿ.ಶ್ರೀನಿವಾಸ ಪ್ರಸಾದ್
ನಾನು ರಾಜಕೀಯದಲ್ಲಿ ಪಕ್ಷಾಂತರಿಯಾಗಿರಬಹುದು ಆದರೆ, ತತ್ವಾಂತರಿಯಾಗಿಲ್ಲ. ಯಾವುದೇ ರಾಜಿ, ಮುಲಾಜಿಗೆ ಒಳಗಾಗಿಲ್ಲ. ಅನ್ಯಾಯವಾದಾಗ ಸಿಡಿದೇಳುವುದು ನನ್ನ ಸ್ವಭಾವ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಪಕ್ಷ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಹೋರಾಟ, ತತ್ವಕ್ಕೆ ಸಂಬಂಧಿಸಿದಂತೆ ಹೋರಾಟದಿಂದ ಬಂದವನು ನಾನು. ಸಾಮಾಜಿಕ ಕಳಕಳಿಯಿದೆ. ಅಂಬೇಡ್ಕರ್ ಕನಸು ನನಸು ಮಾಡುವ ಮನಸ್ಸಿದೆ. ಜೀವನದ ಕೊನೆಯ ಉಸಿರಿರುವವರೆಗೆ ಈ ತತ್ವವನ್ನು ಉಳಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.
ನಾನು ಯಾವುದೇ ಪಕ್ಷದಲ್ಲಿದ್ದರೂ ಅಂಬೇಡ್ಕರ್ ವಿಚಾರ ಬಂದರೆ ರಾಜೀಯಾಗುವುದಿಲ್ಲ, ಅನ್ಯಾಯ ಕಂಡರೆ ಈಗಲೂ ಸಿಡಿದೇಳುತ್ತೇನೆ ಎಂದು ಹೇಳಿದರು.
ಮಾನವ ಸಾಗಾಣಿಕೆಯು ಸಾಮಾಜಿಕ ಪಿಡುಗಾಗಿದ್ದು, ಅದನ್ನು ತೊಡೆಯುವ ನಿಟ್ಟಿನಲ್ಲಿ ಒಡನಾಡಿ ಸೇವಾ ಸಂಸ್ಥೆ ಶ್ರಮಿಸುತ್ತಿದೆ. ಬಹಳಷ್ಟು ಸವಾಲುಗಳನ್ನು ಎದುರಿಸಿಕೊಂಡು ಮುಂದೆ ಬಂದಿದೆ. ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟಮಾಡಬೇಕಿದೆ. ನೊಂದವರು ನಿಮ್ಮೊಂದಿಗೆ ಸಹಕರಿಸುತ್ತಾರೆ. ಇದರಲ್ಲಿ ಯಾವುದೇ ರಾಜಕೀಯದ ಪ್ರಶ್ನೆಯಿಲ್ಲ ಎಂದರು.