ರಾಜ್ಯಕ್ಕೆ ಒಳ್ಳೆಯದಾಗಬೇಕಾದರೆ ರಾಷ್ಟ್ರೀಯ ಪಕ್ಷಗಳು ಮನೆಗೆ ಹೋಗಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್
ಬೀದರ್, ಎ.4: ಕರ್ನಾಟಕ ರಾಜ್ಯಕ್ಕೆ ಒಳ್ಳೆಯದು ಆಗಬೇಕು ಎಂದರೆ ಎರಡು ರಾಷ್ಟ್ರೀಯ ಪಕ್ಷಗಳು ಮನೆಗೆ ಹೋಗಬೇಕು. ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪುರ್ ಇಂದಿಲ್ಲಿ ಹೇಳಿದ್ದಾರೆ.
ರವಿವಾರ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಬಸವಕಲ್ಯಾಣ, ಹತ್ಯಾಳ, ಹಾರಕೂಡ, ಸಿರಗಾಪೂರ, ಗದಲೇಗಾಂವ್, ಮೈಸಲಗಾ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸರಬ್ ಅಲಿ ಖಾದ್ರಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯದಿಂದ ಆಯ್ಕೆಯಾದ ಅಷ್ಟು ಬಿಜೆಪಿ ಸಂಸದರು ರಾಜ್ಯದ ಪರವಾಗಿ ರಾಜ್ಯದ ಜನತೆಯ ಪರವಾಗಿ ಕೇಂದ್ರದಲ್ಲಿ ಯಾವತ್ತಾದರೂ ಧ್ವನಿ ಎತ್ತಿದ್ದಾರಾ..? ಬಸವಕಲ್ಯಾಣದಲ್ಲಿ ಸಾಹೇಬ್, ಬೀದರ್ ನಲ್ಲಿ ಬಂಡೆಪ್ಪ ಖಾಶೆಂಪುರ್, ಬೆಂಗಳೂರಿನಲ್ಲಿ ಕುಮಾರಣ್ಣ ನಾವು ಯಾವಾಗಲೂ ನಿಮ್ಮ ಕೆಲಸ ಮಾಡಲು ತಯಾರಿದ್ದೇವೆ ಎಂದರು.
ಕಾಂಗ್ರೆಸ್ನವರು, ಬಿಜೆಪಿಯವರು ಮ್ಯಾಚ್ ಪಿಕ್ಸಿಂಗ್ ಗಿರಾಕಿಗಳು. ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ. ಆದರೆ, ಅವರು ಎಂದಾದರೂ ರಾಜ್ಯ ಸರಕಾರದ ಒಂದೇ ಒಂದು ಹಗರಣವನ್ನು ಬಯಲಿಗೆಳೆದಿದ್ದಾರಾ..? ಅವರೆಲ್ಲ ಬರೀ ಮ್ಯಾಚ್ ಪಿಕ್ಸಿಂಗ್ ಮಾಡಿಕೊಳ್ಳುತ್ತಾರೆ. ಬಸವಣ್ಣನ ನಾಡಾದ ಬಸವಕಲ್ಯಾಣದಲ್ಲಿ ಜಾತ್ಯತೀತವಾಗಿ ಎಲ್ಲರೂ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳಕ್ಕೆ ಮತ ನೀಡಬೇಕೆಂದು ಬಂಡೆಪ್ಪ ಖಾಶೆಂಪುರ್ ಮನವಿ ಮಾಡಿದರು.
ನಮ್ಮದು ರೈತರ ಪಾರ್ಟಿ, ನಾನು ಸಹಕಾರಿ ಸಚಿವನಾಗಿದ್ದಾಗ ರಾಜ್ಯದ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಕೃಷಿ ಸಚಿವನಾಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದೆ. ಮೋದಿಯವರು ರೈತರಿಗೆ 2ಸಾವಿರ ರೂ.ಕೊಡಲು ಹರಸಾಹಸಪಡುತ್ತಿದ್ದಾರೆ. ನಾವು ರೈತರ ಸಾಲಮನ್ನಾ ಮಾಡಲಿಲ್ಲವೇ..? ಎಂದು ಅವರು ಪ್ರಶ್ನಿಸಿದರು.
ಹಿಂದಿನ ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ರೈತರ ಸಾಲಮನ್ನಾ ಮಾಡಲು ನಾವು ಮುಂದಾದಾಗ ಕಾಂಗ್ರೆಸ್ ಪಕ್ಷವರು ವಿರೋಧ ವ್ಯಕ್ತಪಡಿಸಿದರು. ಆಗ ನಾವು ಸಮ್ಮಿಶ್ರ ಸರಕಾರ ಅಧಿಕಾರದಲ್ಲಿ ಇರಬೇಕಿತ್ತು ಎಂದರೆ, ರೈತರ ಸಾಲಮನ್ನಾಕ್ಕೆ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದು ರೈತರ ಸಾಲಮನ್ನಾ ಮಾಡಿದ್ದೇವು ಎಂದು ಕಾಶೆಂಪುರ್ ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಾಪೂರ, ಅಭ್ಯರ್ಥಿ ಸೈಯದ್ ಯಸರಬ್ ಅಲಿ ಖಾದ್ರಿ ಸೇರಿದಂತೆ ಅನೇಕರು ಮತಯಾಚನೆ ನಡೆಸಿದರು. ಜೆಡಿಎಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಹಾಜರಿದ್ದರು.