ವಿಜಯಪುರ; ಮುಷ್ಕರ ಹತ್ತಿಕ್ಕಲು ಮನೆ ಖಾಲಿ ಮಾಡುವಂತೆ ಸರಕಾರದಿಂದ ನೋಟೀಸ್; ಸಾರಿಗೆ ನೌಕರರ ಕುಟುಂಬ ಆರೋಪ
ವಿಜಯಪುರ: ಸಾರಿಗೆ ನೌಕರರ ಪ್ರತಿಭಟನೆಯನ್ನು ಹತ್ತಿಕ್ಕಲು ಗುಮ್ಮಟನಗರಿ ಸಾರಿಗೆ ಇಲಾಖೆ ಮನೆ ಖಾಲಿ ಮಾಡುವಂತೆ ನೋಟೀಸ್ ಜಾರಿ ಮಾಡಿದೆ ಎಂದು ಸಾರಿಗೆ ನೌಕರರ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರಕ್ಕೆ ವಿಜಯಪುರದಲ್ಲಿ ಭಾರೀ ಬೆಂಬಲ ಸಿಕ್ಕಿದೆ ಎನ್ನಲಾಗಿದ್ದು, ಇದೀಗ ಸಾರಿಗೆ ನೌಕರರಿಗೆ ಶಾಕ್ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ನೌಕರರ ಕುಟುಂಬ ದೂರಿದ್ದಾರೆ.
ಕೆಲಸಕ್ಕೆ ಹಾಜರಾಗಿ, ಇಲ್ಲವಾದರೆ ವಾಸವಿರುವ ಮನೆ ಖಾಲಿ ಮಾಡಬೇಕೆಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ''ನಮ್ಮ ಯಜಮಾನ್ರು ಕೆಲಸಕ್ಕೆ ಹಾಜರಾಗದಿದ್ದರೆ ನಾವೇನು ಮಾಡಬೇಕು. ಏಕಾಏಕಿ ಈ ರೀತಿ ಮನೆ ಖಾಲಿ ಮಾಡಿ ಎಂದು ಹೇಳಿದರೆ ಮಕ್ಕಳನ್ನ ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು ಎಂದು ಮಹಿಳೆಯರು ಪಶ್ನಿಸಿದ್ದಾರೆ.
ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನ ಈಡೇರಿಸಿದ್ದರೆ, ನಾವೇಕೆ ಈ ರೀತಿ ಮಾಡುತ್ತಿದ್ದೇವಾ ? ಈ ಎಲ್ಲ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ನಮ್ಮವರಾರು ಕೆಲಸಕ್ಕೆ ಹೋಗಲ್ಲಾ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಿದ್ದಾರೆ ಎಂದು ಸಾರಿಗೆ ನೌಕರರ ಸಂಬಂಧಿ ಮಹಿಳೆಯೋರ್ವರು ತಿಳಿಸಿದ್ದಾರೆ.
ಈ ಬಗ್ಗೆ 'ವಾರ್ತಾಭಾರತಿ' ಅಧಿಕಾರಿಗಳನ್ನುಸಂಪರ್ಕಿಸಿದಾಗ ''ಈ ತರಹ ಯಾವುದೇ ನೋಟೀಸ್ ಜಾರಿ ಮಾಡಿಲ್ಲ. ಅದು ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವ ನೋಟೀಸ್ ಎಂದು ವಿವರಿಸಿದ್ದಾರೆ.