ಸುರೇಶ್ ಕುಮಾರ್ ಅವರೇ, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಿ: ಕಾಂಗ್ರೆಸ್
ಬೆಂಗಳೂರು, ಎ.15: ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರೇ, ಮಕ್ಕಳ ಜೀವ ಹಾಗೂ ಭವಿಷ್ಯದ ಜೊತೆ ಆಟವಾಡುವುದನ್ನ ನಿಲ್ಲಿಸಿ. ನಿಮ್ಮ ಅಜ್ಞಾನಕ್ಕೆ, ದೂರದೃಷ್ಟಿಯ ಕೊರತೆಗೆ ಯುವ ಪೀಳಿಗೆಯನ್ನು ಬಲಿ ಕೊಡಬೇಡಿ. ಸೋಂಕು ಉಲ್ಬಣಿಸಿರುವ ವೇಳೆ ಸ್ಪಷ್ಟ ನಿರ್ಧಾರ ಕೈಗೊಳ್ಳಿ ಸ್ವಾಮಿ. ಅಡ್ಡ ಗೋಡೆ ಮೇಲೆ ದೀಪ ಇಡುವುದನ್ನು ಬಿಟ್ಟು ಯುವಪೀಳಿಗೆಗೆ ದಾರಿದೀಪವಾಗುವ ಕೆಲಸ ಮಾಡಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.
ಇನ್ನೂ ಸಮಯವಿದೆ, ಇನ್ನೂ ಕಾಲವಿದೆ ಎನ್ನುವ ಬೇಜವಾಬ್ದಾರಿ ಹೇಳಿಕೆ ಬಿಟ್ಟು ವಿದ್ಯಾರ್ಥಿಗಳಿಗೆ ಸ್ಪಷ್ಟತೆ ಕೊಡಿ. ನಿಮ್ಮ ಸೋಂಕಿತ ಸರಕಾರ ಕೊರೋನವನ್ನು ನಿಯಂತ್ರಣಕ್ಕೆ ತರುವ ಯಾವುದೇ ಲಕ್ಷಣವಿಲ್ಲ. ಮುಂದೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಇದೆಲ್ಲವನ್ನೂ ಗಮನಿಸಿದರೆ ಪರೀಕ್ಷೆ ಮುಂದೂಡುವುದು ಅನಿವಾರ್ಯವಾಗಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಕೊರೋನ, ಲಾಕ್ಡೌನ್, ಬಗೆಹರಿಯದ ಶಾಲಾ ಶುಲ್ಕ ವಿವಾದ, ಯಶಸ್ವಿಯಾಗದ ವಿದ್ಯಾಗಮ, ಹಿಂದುಳಿದ ಕಲಿಕಾ ಪ್ರಗತಿ, ಪೂರ್ಣಗೊಳ್ಳದ ಪಾಠಗಳು, ಶಿಕ್ಷಣದಿಂದ ಹೊರಗುಳಿದ ವಿದ್ಯಾರ್ಥಿಗಳು, ಆನ್ಲೈನ್ ತರಗತಿಗಳ ವೈಫಲ್ಯ ಇವೆಲ್ಲವುಗಳ ನಡುವೆ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಿದೆ. ಸುರೇಶ್ ಕುಮಾರ್ ಪರೀಕ್ಷೆಗಳ ಮೊದಲು ಈ ಎಲ್ಲ ವಿಚಾರಗಳಲ್ಲಿ ಲೋಪ ಸರಿಪಡಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.