ವಿಜಯಪುರದಲ್ಲಿ ಕೊರೋನ ಜಾಗೃತಿಗಾಗಿ ರಸ್ತೆಗಿಳಿದ ಪೊಲೀಸ್ ಸಿಬ್ಬಂದಿ
ಎಸ್ಪಿ ಅನುಪಮ್ ಅಗರವಾಲ್ ನೇತೃತ್ವದಲ್ಲಿ ಅಭಿಯಾನ
ವಿಜಯಪುರ: ಜಿಲ್ಲಾ ಪೊಲೀಸ್ ವತಿಯಿಂದ ಕೊರೋನ ಜಾಗೃತಿ ಅಭಿಯಾನಕ್ಕೆ ಎಸ್ಪಿ ಅನುಪಮ್ ಅಗರವಾಲ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಗರದ ಗಾಂಧಿಚೌಕ್ ನಲ್ಲಿ ಎಸ್ಪಿ ಅಗರವಾಲ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಜಿಲ್ಲಾದ್ಯಂತ ಕೊರೋನ ವೈರಸ್ ಹೆಚ್ಚಳ ಹಿನ್ನೆಲೆ ಖುದ್ದಾಗಿ ಪೊಲೀಸ್ ಇಲಾಖೆಯ ಅವರೇ ರಸ್ತೆಗೆ ಇಳಿದು ಕೊರೋನ ವೈರಸ್ ಜಾಗೃತಿಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಮಾಸ್ಕ್ ಉಚಿತವಾಗಿ ವಿತರಿಸಿದರು.
ನಗರದ ಶಾಸ್ತ್ರೀ ಮಾರ್ಕೆಟ್, ಗಾಂಧಿಚೌಕ್, ಬಸವೇಶ್ವರ ಸರ್ಕಲ್ ಸೇರಿದಂತೆ ಜನ ನಿಬಿಡ ಸ್ಥಳದಲ್ಲಿ ಎಸ್ಪಿ ಅನುಪಮ್ ಮಾಸ್ಕ್ ವಿತರಣೆ ಮಾಡಿ ವೈರಸ್ ಜಾಗೃತಿ ಮೂಡಿಸಿದರು. ಇನ್ನು ವೈರಸ್ ಭೀತಿಯಲ್ಲಿ ಸುರಕ್ಷಿತ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿ ಬಳಸುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ಎಸ್ಪಿ ಅಗರವಾಲ್, ಕೊರೋನ ವೈರಸ್ ಎರಡನೇ ಅಲೆ ಜೋರಾಗಿದೆ. ಈ ಹಿನ್ನೆಲೆ ಜಿಲ್ಲಾ ಇಲಾಖೆಯಿಂದ ಕೊರೋನ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದರು.
ವಿಜಯಪುರ ಜಿಲ್ಲಾದ್ಯಂತ ಒಂದು ವಾರದಲ್ಲಿ ಸಾವಿರಕ್ಕೂ ಹೆಚ್ಚು ಕೊರೋನ ಕೇಸ್ ದೃಢವಾಗಿವೆ. ಅದಕ್ಕಾಗಿ ಜಾಗೃತಿ ಕಾರ್ಯಕ್ರಮದ ಜೊತೆಗೆ ಉಚಿತ ಮಾಸ್ಕ್ ನೀಡಲಾಗುತ್ತಿದೆ. ಇನ್ನು ಮಾಸ್ಕ್ ಹಾಕದವರಿಗೆ ದಂಡ ಕೂಡ ವಿಧಿಸಲಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ನಾಗರೀಕರು ಸರ್ಕಾರದ ಕೊರೋನ ಮಾರ್ಗಸೂಸಿ ಪಾಲಿಸುವಂತೆ ಮನವಿ ಮಾಡಿದರು.