ಸರಕಾರ ತನ್ನದೇ ಮಾರ್ಗಸೂಚಿ ಉಲ್ಲಂಘಿಸುವ ಮೂಲಕ ತುಘಲಕ್ ಆಡಳಿತ ನಡೆಸುತ್ತಿದೆ: ಕುಮಾರಸ್ವಾಮಿ
ಬೆಂಗಳೂರು, ಎ.22: ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಂಗಳವಾರ ರಾತ್ರಿ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಮಾರ್ಗಸೂಚಿಗಳನ್ನು ಇಂದು ರಾಜ್ಯ ಸರಕಾರವೇ ಉಲ್ಲಂಘಿಸಿರುವುದು ಒಂದು ರೀತಿಯಲ್ಲಿ ತುಘಲಕ್ ಆಡಳಿತದಂತೆ ಭಾಸವಾಗುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಡಿಯೋ ಸಂದೇಶದಲ್ಲಿ ಕಿಡಿಗಾರಿದ್ದಾರೆ.
ಮುಖ್ಯಮಂತ್ರಿ ಇವತ್ತು ಆಸ್ಪತ್ರೆಯಿಂದ ಬಿಡುಗಡೆ ಆದ ನಂತರ ತುರ್ತು ಸಭೆ ಕರೆದಿದ್ದಾರೆ. ಶುಕ್ರವಾರ ಸಂಜೆ ವರೆಗೆ ಯಾವುದೆ ಬಗೆಯ ವ್ಯಾಪಾರ ನಡೆಸಲು ಸಮಸ್ಯೆ ಇಲ್ಲ ಎಂದು ಹೊರಡಿಸಿದ್ದ ಮಾರ್ಗಸೂಚಿಯನ್ನು ಏಕಾಏಕಿ ಉಲ್ಲಂಘಿಸಿ, ಸಣ್ಣ ಸಣ್ಣ ಅಂಗಡಿಗಳನ್ನೆಲ್ಲ ಮುಚ್ಚಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸರಕಾರ ತಾನೆ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುವ ಮೂಲಕ ಒಂದು ರೀತಿಯಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದೆ. ಏಕಾಏಕಿ ಯಾವುದೆ ಮುನ್ಸೂಚನೆ ನೀಡದೆ ಮುಚ್ಚಿಸಲು ಇವರಿಗೆ ತೀರ್ಮಾನ ಕೊಟ್ಟಿದ್ದು ಯಾರು? ಸಿಎಂ ಹೇಳಿದ್ದಾರೋ ಅಥವಾ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೋ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ರಾಜ್ಯಪಾಲರ ಸಭೆಯಲ್ಲಿ ತಕ್ಷಣ ಲಾಕ್ಡೌನ್ ಮಾಡಿ ಎಂದು ಸಲಹೆ ನೀಡಿದ್ದೆ. ಆದರೆ, ಸರಕಾರ ದಿಟ್ಟ ನಿರ್ಧಾರ ಮಾಡಲು ಹಿಂದಕ್ಕೆ ಸರಿಯಿತು. ಪ್ರಧಾನಿ ಲಾಕ್ಡೌನ್ ಅವಶ್ಯಕತೆ ಇಲ್ಲ ಎಂದು ಸಂದೇಶ ನೀಡಿದ ನಂತರ ಸರಕಾರ ಮಾರ್ಗಸೂಚಿ ಪ್ರಕಟ ಮಾಡಿತು ಎಂದು ಅವರು ಹೇಳಿದರು.
ಆದರೆ, ಈಗ ಯಾವುದೆ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಏಕಾಏಕಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವ ಪ್ರಯತ್ನ ಮಾಡಿರುವುದು ಎಷ್ಟರಮಟ್ಟಿಗೆ ಸರಿ. ದಿನಗೂಲಿ ನೌಕರರು, ಅಂಗಡಿಗಳಲ್ಲಿ ಕೆಲಸ ಮಾಡುವವರಿಗೆ ಮಾಲಕರು ಸಂಬಳ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಮುಖ್ಯಮಂತ್ರಿಗೆ ಹಾಗೂ ಈ ಸರಕಾರಕ್ಕೆ ಜನತೆಯ ಬಗ್ಗೆ ಮಾನವೀಯತೆ ಇದ್ದಿದ್ದರೆ ಅವರ ತೀರ್ಮಾನಗಳ ಬಗ್ಗೆ ಸ್ಪಷ್ಟಟೆ ಇರುತ್ತಿತ್ತು. ಕೋವಿಡ್ ಸೋಂಕಿತರ ಕುಟುಂಬಗಳು ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗದೆ ಐದಾರು ದಿನಗಳ ಕಾಲ ವಾಹನಗಳಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವವರ ಪರಿಸ್ಥಿತಿ ನೋಡಿದರೆ ಈ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಅವರು ಕಿಡಿಗಾರಿದರು.
ಸರಕಾರಕ್ಕೆ ಅಲ್ಪಸ್ವಲ್ಪ ಜವಾಬ್ದಾರಿ ನಿರ್ವಹಿಸುವ ಮನಸ್ಸಿದ್ದರೆ ಕೂಡಲೇ ಪ್ರಾಮಾಣಿಕ ವೈದ್ಯರ ಪಡೆಯನ್ನು ರಚನಿಸಿ, ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿ, ಸರಕಾರಿ ಕಚೇರಿಗಳು, ಖಾಸಗಿ, ಸರಕಾರಿ ಶಾಲೆಗಳನ್ನು ತನ್ನ ಸುರ್ಪದಿಗೆ ತೆಗೆದುಕೊಂಡು ಕೋವಿಡ್ ಸೋಂಕಿತರ ಆರೈಕೆಗೆ ವ್ಯವಸ್ಥೆ ಮಾಡಲಿ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಸಾವಿರಾರು ಕೋಟಿ ರೂ.ಖರ್ಚಾದರೂ ಪರವಾಗಿಲ್ಲ. ಜನರ ಜೀವ ರಕ್ಷಣೆ ಮಾಡಲು ಪ್ರಯತ್ನಿಸಿ. ತಜ್ಞರ ಪ್ರಕಾರ ಒಬ್ಬ ಸೋಂಕಿತನಾದರೆ 400 ಜನರಿಗೆ ಆ ಸೋಂಕನ್ನು ಹರಡಿಸಬಲ್ಲ. ಮದ್ಯದ ಅಂಗಡಿ ತೆರೆಯಲು ಅವಕಾಶ ಕೊಟ್ಟಿರುವ ಸರಕಾರ, ಸಣ್ಣಪುಟ್ಟ ಅಂಗಡಿಗಳನ್ನು ಮುಚ್ಚಿಸಲು ಮುಂದಾಗಿರುವುದು ತುಘಲಕ್ ಆಡಳಿತ ಅಲ್ಲದೇ ಮತ್ತೇನು ಅಲ್ಲ ಎಂದು ಅವರು ಟೀಕಿಸಿದರು.
ಈ ಸರಕಾರಕ್ಕೆ ದೂರದೃಷ್ಟಿ ಇಲ್ಲ. ಅನುಭವಸ್ಥರು ನೀಡುವ ತಿಳುವಳಿಕೆ ಅನುಷ್ಠಾನ ಮಾಡಲ್ಲ. ಇವರು ಕೈಗೊಳ್ಳುವ ಇಂತಹ ತೀರ್ಮಾನಗಳಿಂದ ಜನಸಾಮಾನ್ಯರು ದೊಡ್ಡಮಟ್ಟದ ಜೀವನದ ಸಮಸ್ಯೆ ಎದುರಿಸುತ್ತಾರೆ. ಕುಟುಂಬಗಳು ಬೀದಿಗೆ ಬರುವ ತೀರ್ಮಾನ ಇದಾಗಿದೆ. ಆಕ್ಸಿಜನ್ ಕೊರತೆ ಇಲ್ಲ ಅನ್ನುತ್ತಾರೆ. ಆದರೆ, ಅಕ್ಸಿಜನ್ ಕೊರತೆಯಿಂದ ಪ್ರತಿದಿನ ರೋಗಿಗಳು ಸಾಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಗಾರಿದರು.
ಮುಖ್ಯಮಂತ್ರಿಗೆ ಅಲ್ಪಸ್ವಲ್ಪ ಮಟ್ಟಿಗೆ ಮಾನವೀಯತೆ ಇದ್ದರೆ ಪ್ರತಿ ಕುಟುಂಬಕ್ಕೆ ಆರೋಗ್ಯ ರಕ್ಷಣೆ ನೀಡಲಿ. ಬೆಂಗಳೂರಿನಲ್ಲಿ ‘ಬಿಯು ಸಂಖ್ಯೆ’ ಕೊಡಲು ಒಂದು ವಾರ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಪಾಲಿಕೆಯಲ್ಲಿ ನಡೆಯುತ್ತಿರುವ ಆಡಳಿತದ ವ್ಯವಸ್ಥೆ ಇದು. ಸರಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಿದರೂ, ಅವರು ಜನರ ಜೀವದ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ ಎಂದು ಅವರು ಹೇಳಿದರು.
ನೀವು ಜನಪರವಾಗಿದ್ದರೆ ಪಾಪದ ಕೆಲಸವನ್ನು ಸರಿಪಡಿಸಿಕೊಳ್ಳಿ. ನಿಮ್ಮ ನಡವಳಿಕೆ, ಬದಲಾಯಿಸಿಕೊಳೀ. ಜನರ ಜೊತೆ ಚೆಲ್ಲಾಟವಾಡಬೇಡಿ. ಯಾರನ್ನೂ ಮೆಚ್ಚಿಸಲು ನಡೆದುಕೊಳ್ಳಬೇಡಿ ಎಂದು ಕುಮಾರಸ್ವಾಮಿ ಹೇಳಿದರು.