ವಕ್ಫ್ ಸಂಸ್ಥೆಗಳಲ್ಲಿ ಕೋವಿಡ್ ಸಹಾಯ ಕೇಂದ್ರ ನಿರ್ವಹಣೆ: ಮುಹಮ್ಮದ್ ಯೂಸುಫ್
ಬೆಂಗಳೂರು, ಎ.29: ರಾಜ್ಯದಲ್ಲಿ ಕೋವಿಡ್-19ರ ಪ್ರಕರಣಗಳಲ್ಲಿ ತೀರಾ ಹೆಚ್ಚಳ ಕಂಡು ಬಂದಿದ್ದು, ಕೋವಿಡ್ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಕಟ್ಟಡ ಹಾಗೂ ಖಾಲಿ ಸ್ಥಳಗಳ ಅವಶ್ಯಕತೆ ಕಂಡು ಬಂದಿದೆ. ಕೋವಿಡ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ಆಡಳಿತದ ಜೊತೆ ಕೈ ಜೋಡಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮದ್ ಯೂಸುಫ್ ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯದ ಎಲ್ಲ ವಕ್ಫ್ ಸಂಸ್ಥೆಗಳ ಆಡಳಿತ ಸಮಿತಿಗಳು, ಮುತವಲ್ಲಿ, ಆಡಳಿತಾಧಿಕಾರಿಗಳಿಗೆ ಜಿಲ್ಲಾ ವಕ್ಫ್ ಅಧಿಕಾರಿಗಳ ಮೂಲಕ ನಿರ್ದೇಶನ ನೀಡುವ ಸುತ್ತೋಲೆಯನ್ನು ಹೊರಡಿಸಿರುವ ಅವರು, ರಾಜ್ಯದ ಎಲ್ಲ ವಕ್ಫ್ ಸಂಸ್ಥೆಗಳು ತಮ್ಮ ಅಧೀನದಲ್ಲಿರುವ ಶಾದಿ ಮಹಲ್, ಸಮುದಾಯ ಭವನ, ಖಾಲಿ ಜಾಗ ಮತ್ತು ಲಭ್ಯ ಸಂಪನ್ಮೂಲಗಳ ಸಮೇತ ಒದಗಿಸಬಹುದಾಗಿದೆ ಎಂದು ಹೇಳಿದ್ದಾರೆ.
ವಾರ್ಡ್, ಮೊಹಲ್ಲಾ ಮತ್ತು ಗ್ರಾಮಗಳಲ್ಲಿ ಚುಚ್ಚುಮದ್ದು(ವ್ಯಾಕ್ಸಿನ್)ಗಳನ್ನು ಅಳವಡಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ಸಂಘ, ಸಂಸ್ಥೆಗಳಿಗೆ ಖಾಲಿ ಜಾಗ ಮತ್ತು ಇತರೆ ಸಂಪನ್ಮೂಲಗಳೊಂದಿಗೆ ಸಹಕರಿಸಬಹುದಾಗಿದೆ ಎಂದು ಮುಹಮ್ಮದ್ ಯೂಸುಫ್ ತಿಳಿಸಿದ್ದಾರ.
ಅದೇ ರೀತಿಯಲ್ಲಿ ರಾಜ್ಯದ ವಕ್ಫ್ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಸಾರ್ವಜನಿಕರಲ್ಲಿ ಮಸೀದಿಗಳ ಧ್ವನಿವರ್ಧಕಗಳ ಮುಖಾಂತರ ಸರಕಾರದಿಂದ ಹೊರಡಿಸಲಾಗಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಜಾಗೃತಿ ಹಾಗೂ ಅರಿವು ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಅನಗತ್ಯವಾಗಿ ಮನೆಗಳಿಂದ ಹೊರಗೆ ಬಾರದಂತೆ ಸೂಚಿಸಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕೈಗಳನ್ನು ಸೋಪಿನಿಂದ ಪದೇ ಪದೇ ತೊಳೆಯುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡಬೇಕು, ಚುಚ್ಚುಮದ್ದು(ವ್ಯಾಕ್ಸಿನ್) ಪಡೆಯುವಂತೆ ಸೂಚಿಸಬೇಕು, ಚುಚ್ಚುಮದ್ದು ಕುರಿತು ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಯಾವುದೆ ವ್ಯಕ್ತಿಗೆ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರ ಹಾಗೂ ವೈದ್ಯಾಧಿಕಾರಿಗಳಿಗೆ ಸಂಪರ್ಕಿಸಲು ಸೂಚಿಸಬೇಕು. ಅಲ್ಲದೆ, ಸಕ್ಷಮ ಪ್ರಾಧಿಕಾರಿಗಳ ಅನುಮತಿಯೊಂದಿಗೆ ಸ್ಥಳೀಯ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಕೋವಿಡ್ ಕೇರ್ ಸೆಂಟರ್ಗಳ ನಿರ್ವಹಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಕ್ಫ್ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಘ, ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಸಹಕರಿಸುವಂತೆ ಮುಹಮ್ಮದ್ ಯೂಸುಫ್ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.