ತೀರ್ಥಹಳ್ಳಿ ಪ.ಪಂ. ಚುನಾವಣೆ: 25 ವರ್ಷಗಳ ಬಿಜೆಪಿ ಅಧಿಕಾರ ಅಂತ್ಯ
15 ವಾರ್ಡ್ಗಳಲ್ಲಿ ಕಾಂಗ್ರೆಸ್ಗೆ 9, ಬಿಜೆಪಿಗೆ 6 ಸ್ಥಾನ
ಶಿವಮೊಗ್ಗ : ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, 25 ವರ್ಷಗಳ ಬಿಜೆಪಿ ಆಡಳಿತ ಅಂತ್ಯಗೊಂಡಿದೆ. ಪಟ್ಟಣ ಪಂಚಾಯಿತಿಯ 15 ವಾರ್ಡ್ ಗಳ ಪೈಕಿ 9 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆದ್ದು ಸ್ಪಷ್ಟ ಬಹುಮತಗಳಿಸಿದೆ.
15 ವಾರ್ಡ್ಗಳ ಪೈಕಿ ಬಿಜೆಪಿ 6 ವಾರ್ಡ್ಗಳಲ್ಲಿ ಗೆದ್ದಿದೆ. ಕಳೆದ 25 ವರ್ಷದಿಂದ ನಿರಂತರವಾಗಿ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರದ ಚುಕ್ಕಾಣಿಯನ್ನು ಬಿಜೆಪಿ ಹಿಡಿದಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ.
ಪಟ್ಟಣ ಪಂಚಾಯತ್ ಅಧಿಕಾರವನ್ನು ಹಿಡಿಯಬೇಕು ಎಂದು ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ರಾಘವೇಂದ್ರ ಮತ್ತು ಶಾಸಕ ಅರಗ ಜ್ಞಾನೇಂದ್ರ ಅವರು ಚುನಾವಣಾ ಪ್ರಚಾರ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಕಾಂಗ್ರೆಸ್ನಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್,ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಆರ್.ಎಂ ಮಂಜುನಾಥ್ ಹಾಗೂ ಜಿಲ್ಲಾಧ್ಯಕ್ಷ ಹೆಚ್ಎಸ್ ಸುಂದರೇಶ್ ಒಗ್ಗಟ್ಟಿನಿಂದ ಭರ್ಜರಿ ಪ್ರಚಾರ ನಡೆಸಿ ಪಟ್ಟಣ ಪಂಚಾಯತ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಗೆಲುವು ಸಾಧಿಸಿದವರ ಪಟ್ಟಿ : ವಾರ್ಡ್ ನಂ. 1 ಸೊಪ್ಪುಗುಡ್ಡೆ ರಾಘವೇಂದ್ರ (ಬಿಜೆಪಿ), ವಾರ್ಡ್ ನಂ. 2 ಯತಿರಾಜ್ (ಬಿಜೆಪಿ), ವಾರ್ಡ್ ನಂ. 3 ದತ್ತಣ್ಣ (ಕಾಂಗ್ರೆಸ್), ವಾರ್ಡ್ ನಂ. 4 ನಮ್ರತ್(ಕಾಂಗ್ರೆಸ್), ವಾರ್ಡ್ ನಂ. 5 ಸುಶಿಲಾ ಶೆಟ್ಟಿ (ಕಾಂಗ್ರೆಸ್), ವಾರ್ಡ್ ನಂ. 6 ಶಬ್ನಮ್ (ಕಾಂಗ್ರೆಸ್), ವಾರ್ಡ್ ನಂ.7 ಜೈಯು ಶೆಟ್ಟಿ (ಕಾಂಗ್ರೆಸ್), ವಾರ್ಡ್ ನಂ. 8 ಜ್ಯೋತಿ ಗಣೇಶ (ಬಿಜೆಪಿ), ವಾರ್ಡ್ ನಂ. 9 ಸಂದೇಶ ಜವಳಿ (ಬಿಜೆಪಿ), ವಾರ್ಡ್ ನಂ.10 ಗಣಪತಿ (ಕಾಂಗ್ರೆಸ್), ವಾರ್ಡ್ ನಂ. 11 ಜ್ಯೋತಿ ಮೋಹನ್(ಬಿಜೆಪಿ), ವಾರ್ಡ್ ನಂ.12 ಬಾಬಿ ರವೀಶ (ಬಿಜೆಪಿ), ವಾರ್ಡ್ ನಂ. 13 ಗೀತಾ ರಮೇಶ (ಕಾಂಗ್ರೆಸ್), ವಾರ್ಡ್ ನಂ.14 ಮಂಜುಳಾ ನಾಗೇಂದ್ರ (ಕಾಂಗ್ರೆಸ್), ವಾರ್ಡ್ ನಂ.15 ಅಸಾದಿ (ಕಾಂಗ್ರೆಸ್) ಜಯಗಳಿಸಿದ್ದಾರೆ.