ಕ್ಷುಲ್ಲಕ ಕಾರಣಕ್ಕೆ ವೈದ್ಯರ ಮೇಲೆ ಹಲ್ಲೆ ಆರೋಪ: ಮೂವರ ಬಂಧನ
ಮಡಿಕೇರಿ, ಮೇ 4: ಕ್ಷುಲ್ಲಕ ಕಾರಣಕ್ಕೆ ಮೂವರು ದುಷ್ಕರ್ಮಿಗಳು ವೀರಾಜಪೇಟೆ ತಾಲೂಕಿನ ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಿವೇಕಾನಂದ ಪ್ರತಿಷ್ಠಾನದ ವೈದ್ಯ ಡಾ.ಜಿ.ಹೊಸಮನಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಹಲ್ಲೆಯಿಂದ ವೈದ್ಯರ ಕೈ ಮೂಳೆ ಮುರಿದಿದೆ ಎಂದು ಆರೋಪಿಸಲಾಗಿದೆ.
ಘಟನೆ ವಿವರ: ತಿತಿಮತಿ ಗ್ರಾಮದ ಫಿರೋಝ್ ಎಂಬವರ ಪತ್ನಿ ಮಧ್ಯಾಹ್ನ 2:30ರ ಸುಮಾರಿಗೆ ಪ್ರಜ್ಞೆ ತಪ್ಪಿದ್ದಾರೆ. ಹೀಗಾಗಿ ಸೈಯದ್ ಹಾಗೂ ಆತನ ಸ್ನೇಹಿತರು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅರ್ಧ ಗಂಟೆ ಕಳೆದರೂ ವೈದ್ಯರು ಬರಲಿಲ್ಲ ಎನ್ನಲಾಗಿದೆ. ಹೀಗಾಗಿ ಮಹಿಳೆಯನ್ನು ಯಾರು ಸರಿಯಾಗಿ ಗಮನಿಸುತ್ತಿಲ್ಲವೆಂದು ಅಸಮಾಧಾನಗೊಂಡ ಯುವಕರು ಸ್ಥಳಕ್ಕೆ ಬಂದ ವೈದ್ಯರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ವೈದ್ಯ ಡಾ.ಜಿ.ಹೊಸಮನಿ(70) ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಲ್ಲೆ ಆರೋಪಿಗಳಾದ ಮರಪಾಲದ ಫಿರೋಝ್, ಸಮೀರ್, ಎಡತೊರೆ ಸೈಯದ್ ಆಲವಿ ಎಂಬವರನ್ನು ಗೋಣಿಕೋಪ್ಪ ಪೋಲೀಸರು ಬಂಧಿಸಿ ಪ್ರಕರಣ ದಾಖಸಿಕೊಂಡಿದ್ದಾರೆ.