ಕೋವಿಡ್ ಸಂದರ್ಭದಲ್ಲಿ ಜನರಿಗೆ ಪಂಪ್ ಹೊಡೆದು ಧೈರ್ಯ ತುಂಬಲು ಸಾಧ್ಯವೇ?: ಸಚಿವ ಉಮೇಶ್ ಕತ್ತಿ
ಉಮೇಶ್ ಕತ್ತಿ
ಬಾಗಲಕೋಟೆ: 'ಅಕ್ಕಿ ಕೊಡಿ ಎಂದರೆ ನೀವು ಸಾಯೋದೆ ಒಳ್ಳೆಯದು' ಎಂದು ಮೊನ್ನೆಯಷ್ಟೇ ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ, ನಿನ್ನೆ ಅಧಿಕಾರಿಗಳ ಸಭೆಯಲ್ಲಿ 'ನೀವು ಉಳಿಯುತ್ತಿರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು' ಎಂದು ನಾಲಿಗೆ ಹರಿಯಬಿಟ್ಟಿದ್ದರು. ಇಂದು 'ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಪಂಪ್ ಹೊಡೆದು ಧೈರ್ಯ ತುಂಬಲು ಸಾಧ್ಯವೇ?' ಸಚಿವ ಉಮೇಶ್ ಕತ್ತಿ ಪ್ರಶ್ನಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ರವಿವಾರ ಇಲ್ಲಿನ ಬೀಳಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಕೋವಿಡ್ ಸೋಂಕಿನ ಸಂದರ್ಭದಲ್ಲಿ ರೆಮಿಡಿಸಿವಿರ್ ತೆಗೆದುಕೊಂಡರೂ ಸೋಂಕಿನಿಂದ ಜನ ಸಾಯುತ್ತಿದ್ದಾರೆ. ಚಿಕಿತ್ಸೆಗೂ ಸ್ಪಂದಿಸದೇ ಮರಣ ಹೊಂದುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರಿಗೆ ಪಂಪ್ ಹೊಡೆದು ಧೈರ್ಯ ತುಂಬಲು ಸಾಧ್ಯವೇ?' ಎಂದು ಸಚಿವ ಉಮೇಶ್ ಕತ್ತಿ ಪ್ರಶ್ನಿಸಿದ್ದಾರೆ.
`ಮೊನ್ನೆ-ಹೋಗಿ ಸಾಯ್ರಿ, ಇಂದು-ನೀವ್ ಬದುಕೋದು ನನಗೆ ಅನಗತ್ಯ, ನಾನು ಮಾತ್ರ ಬದುಕಬೇಕು! ಇದು ಬಿಜೆಪಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಉಮೇಶ್ ಕತ್ತಿ ಅವರ ಮಾತುಗಳು. ರಾಜ್ಯ ಗಂಭೀರ ಸ್ಥಿತಿ ಎದುರಿಸುತ್ತಿರುವಾಗ ಬೇಜವಾಬ್ದಾರಿತನದಲ್ಲಿ ಬಿಜೆಪಿಯ ಇಡೀ ಸಚಿವ ಸಂಪುಟ ಕಾಲ ಕಳೆಯುತ್ತಿದೆ. ಇದು ತಮಾಷೆಯ ಸಂದರ್ಭವೇ?'
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ