ಗೃಹ ಸಚಿವ ಬೊಮ್ಮಾಯಿ, ವಿಜಯೇಂದ್ರ ದಿಲ್ಲಿ ಭೇಟಿ ಬೆನ್ನಲ್ಲೆ ಸಿಎಂ ಬಿಎಸ್ವೈಗೆ ಬಿಜೆಪಿ ವರಿಷ್ಠರ ಬುಲಾವ್ ?
ಕುತೂಹಲಕ್ಕೆ ಕಾರಣವಾದ ದಿಢೀರ್ ರಾಜಕೀಯ ಬೆಳವಣಿಗೆ
ಬೆಂಗಳೂರು, ಮೇ 10: ರಾಜ್ಯದಲ್ಲಿ ಉಲ್ಬಣಿಸುತ್ತಿರುವ ಕೊರೋನ ವೈರಸ್ ಸೋಂಕು, ಮಿತಿ ಮೀರುತ್ತಿರುವ ಸಾವಿನ ಪ್ರಕರಣಗಳು, ಸರಕಾರ ಹೇರಿರುವ ಲಾಕ್ಡೌನ್ನಿಂದಾಗಿ ಬಡ ಕೂಲಿ ಕಾರ್ಮಿಕರ ಸಂಕಷ್ಟದ ಮಧ್ಯೆಯೇ ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಹೊಸದಿಲ್ಲಿಗೆ ಬರುವಂತೆ ಆಹ್ವಾನಿಸಿದ್ದಾರೆಂದು ಗೊತ್ತಾಗಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಯ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿಬರುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ನಿನ್ನೆಯಷ್ಟೇ ಗೃಹ ಹಾಗೂ ಕಾನೂನು ಸಂಸದೀಯ ವ್ಯವಹಾರ ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿಎಸ್ವೈ ಅವರ ಪುತ್ರ ಬಿ.ವೈ.ವಿಜಯೇಂದ್ರ ದಿಲ್ಲಿಗೆ ಹೋಗಿ ಬಂದಿದ್ದರು.
ಅವರಿಬ್ಬರೂ ಬೆಂಗಳೂರಿಗೆ ಧಾವಿಸಿದ ಬೆನ್ನಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬುಲಾವ್ ನೀಡಿರುವುದು ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಆದಷ್ಟು ಶೀಘ್ರವೇ ಮುಖ್ಯಮಂತ್ರಿ ಯಡಿಯೂರಪ್ಪ ಹೊಸದಿಲ್ಲಿಗೆ ತೆರಳುವ ಸಾಧ್ಯತೆಗಳಿವೆ. ಕೋವಿಡ್ ನಿರ್ವಹಣೆಗೆ ಆಕ್ಸಿಜನ್, ರೆಮ್ಡೆಸಿವಿರ್, ಕೋವಿಡ್ ಲಸಿಕೆ ಕೊರತೆ ಸಂಬಂಧ ಸಮಾಲೋಚನೆ ನಡೆಸಲು ತೆರಳಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಸಿಎಂ ಹೊಸದಿಲ್ಲಿಗೆ ಯಾವ ಕಾರಣಕ್ಕಾಗಿ ತೆರಳುತ್ತಿದ್ದಾರೆಂಬ ಸ್ಪಷ್ಟನೆ ಇಲ್ಲ.
ಸತ್ಯಕ್ಕೆ ದೂರ: `ರಾಜ್ಯದಲ್ಲಿ ನಾಯಕತ್ವ ಬದಲಾಗುತ್ತದೆ ಎಂಬುದು ಹಸಿ ಸುಳ್ಳು, ಇವೆಲ್ಲ ಸತ್ಯಕ್ಕೆ ದೂರವಾದ ಸಂಗತಿ,. ನಾನು ಹೊಸದಿಲ್ಲಿಗೆ ಹೋಗಿದ್ದು ರಾಜಕೀಯ ಉದ್ದೇಶ ಖಂಡಿತ ಅಲ್ಲ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರಕಾರದ ನೆರವು, ಕೋರಿಕೆ ಬಿಟ್ಟರೆ ಬೇರೆ ಯಾವುದೇ ಉದ್ದೇಶವಿರಲಿಲ್ಲ' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಹೊಸದಿಲ್ಲಿಯಿಂದ ರಾಜ್ಯಕ್ಕೆ ಆಗಮಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ನ ಸಂಕಷ್ಟದ ಈ ಸಂದರ್ಭದಲ್ಲಿ ರಾಜಕೀಯ ಚರ್ಚೆಗಳು ನಡೆಸುವುದು ಸಮಂಜಸವಲ್ಲ. ಆ ರೀತಿಯ ಯಾವುದೇ ಚರ್ಚೆಗಳು ನಡೆದಿಲ್ಲ. ಬಿಎಸ್ವೈ ಅವರ ಪುತ್ರ ವಿಜಯೇಂದ್ರ ಹಾಗೂ ತಾವು ದಿಲ್ಲಿಗೆ ತೆರಳಿದ್ದರ ಹಿಂದೆ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗಳ ಸುದ್ದಿಗಳು ಹಸಿ ಸುಳ್ಳು, ಮುಖ್ಯಮಂತ್ರಿ ಬದಲಾಗಲಿದ್ದಾರೆಂಬ ವರದಿ ಸತ್ಯಕ್ಕೆ ದೂರ. ಸಂದಿಗ್ಧ ಸಂದರ್ಭದಲ್ಲಿ ಈ ರೀತಿ ವದಂತಿಗಳನ್ನು ಹರಡುವುದು ಸೂಕ್ತವಲ್ಲ, ಸಮಂಜಸವೂ ಅಲ್ಲ. ಈ ರೀತಿಯ ಚರ್ಚೆಗಳೇ ನಡೆದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದ ಕೊರೋನ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದ್ದೇವೆ. ಹಾಗೆಯೇ ಆಮ್ಲಜನಕ ಪೂರೈಕೆ ಸಂಬಂಧವೂ ಮನವಿ ಸಲ್ಲಿಸಿ ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕ ಬಳಕೆಗೆ ಅನುಮತಿ ಕೋರಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಕೊರೋನ ರಾಜ್ಯವನ್ನು ಕಾಡುತ್ತಿರುವಾಗ ಬಿಜೆಪಿ ಜವಾಬ್ದಾರಿ ಮರೆತು ರಾಜಕೀಯದ ಆಟ ನಡೆಸುತ್ತಿದೆ. ಯಾವ ಹುದ್ದೆಯಲ್ಲೂ ಇರದ ಬಿ.ವೈ. ವಿಜಯೇಂದ್ರ ಸರಕಾರದ ಚರ್ಚೆಯಲ್ಲಿ ಭಾಗವಹಿಸಿದ್ದೇಕೆ? ರಾಜ್ಯ ಬಿಜೆಪಿ ಈ ದಿಲ್ಲಿ ಭೇಟಿಯನ್ನು 'ಬಿಎಸ್ವೈ ಮುಕ್ತ' ಅಭಿಯಾನದ ಭಾಗ ಎಂದು ಒಪ್ಪಿಕೊಳ್ಳುವಿರಾ? ಅಥವಾ ಬಿ.ವೈ.ವಿಜಯೇಂದ್ರ `ಸೂಪರ್ ಸಿಎಂ' ಎಂದು ಒಪ್ಪಿಕೊಳ್ಳುವಿರಾ?'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ