ಶಿವಮೊಗ್ಗದಲ್ಲಿ ಮೇ 13ರಿಂದ ಸಂಪೂರ್ಣ ಲಾಕ್ಡೌನ್ : ಅಗತ್ಯ ವಸ್ತುಗಳ ಖರೀದಿಗೂ ನಿರ್ಬಂಧ; ಸಚಿವ ಈಶ್ವರಪ್ಪ
ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ದಿನಗಳ ಕಾಲ ಸಂಪೂರ್ಣ ಕಟ್ಟುನಿಟ್ಟಿನ ಲಾಕ್ ಡೌನ್ಗೆ ಘೋಷಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಮೇ 13 ರಿಂದ ಮೇ 16 ರವೆಗೆ ಶಿವಮೊಗ್ಗ ನಗರಕ್ಕೆ ಸೀಮಿತವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ಸ್ಥಳೀಯ ಏರಿಯಾವನ್ನು ಬಿಟ್ಟು ಯಾರು ಹೊರಬರುವಂತಿಲ್ಲ ಎಂದು ಸಚಿವರು ಕಟ್ಟಪ್ಪಣೆ ಹೊರಡಿಸಿದ್ದಾರೆ. ಜೊತೆಗೆ ದಿನಸಿ ಸೇರಿದಂತೆ ಏನೇ ಅಗತ್ಯ ವಸ್ತು ಬೇಕಾದರೂ ನಾಳೆಯೇ ಖರೀದಿ ಮಾಡಿಟ್ಟುಕೊಳ್ಳುವಂತೆ ಎಂದು ಸೂಚನೆ ನೀಡಿದ್ದಾರೆ.
ಗುರುವಾರ, ಶುಕ್ರವಾರ, ಶನಿವಾರ ಹಾಗೂ ರವಿವಾರದವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಯಾವುದೆ ಖರೀದಿಗೆ ಅವಕಾಶ ಇಲ್ಲ. ಮೆಡಿಕಲ್ ಶಾಪ್ ಮಾತ್ರ ಓಪನ್ ಇರಲಿದೆ ಎಂದರು. ಕೈಗಾರಿಕೆಗಳು , ಹೋಲ್ಸೇಲ್ ದಿನಸಿ, ಗಾಂಧಿ ಬಜಾರ್ ವರ್ತಕರ ಜೊತೆ ಸಭೆ ನಡೆಸಿ ವ್ಯಾಪಾರ ವಹಿವಾಟು ಬಂದ್ ಮಾಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು ನಾಲ್ಕು ದಿನ ಬಂದ್ ಆಗಲಿವೆ. ಎಪಿಎಂಸಿಯನ್ನು ಕೂಡ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಹೊರ ಊರಿನಿಂದ ಯಾರು ಬರುವಂತಿಲ್ಲ
ಬೆಂಗಳೂರು ಸೇರಿದಂತೆ ಹೊರ ಊರಿನಿಂದ ಬರಲು ಅವಕಾಶವಿಲ್ಲ ಎಂದು ಸೂಚಿಸಿದ ಸಚಿವರು, ಸ್ಥಳೀಯವಾಗಿ ದಿನಸಿ, ತರಕಾರಿ ಅಂಗಡಿಗಳಿರುತ್ತವೆ. ವಾಹನಗಳ ಬಳಕೆಯನ್ನೂ ಸಂಪೂರ್ಣವಾಗಿ ನಿಷೇಧಸಲಾಗಿದೆ. ಹೊಟೇಲ್ನಲ್ಲಿ ಪಾರ್ಸಲ್ಗೆ ಮಾತ್ರ ಅನುಮತಿ ನೀಡಲಾಗಿದೆ. ಮಟನ್, ಚಿಕನ್ ಅಂಗಡಿ ಕೂಡ ಬಂದ್ ಮಾಡಲಾಗಿದೆ ಎಂದರು.