ಮೇ ತಿಂಗಳ ಪಡಿತರ ಪಡೆಯಲು ಬೆರಳಚ್ಚು ಕಡ್ಡಾಯವಲ್ಲ: ಆಹಾರ ಇಲಾಖೆ ಆದೇಶ
ಬೆಂಗಳೂರು, ಮೇ 12: ರಾಜ್ಯದಲ್ಲಿ ಕೊರೋನ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರು ಹಾಗೂ ನ್ಯಾಯಬೆಲೆ ಅಂಗಡಿ ಮಾಲಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ 2021ರ ಮೇ ತಿಂಗಳ ಪಡಿತರವನ್ನು ಪಡಿತರ ಚೀಟಿದಾರರ ಬೆರಳು ಮುದ್ರೆ(ಬಯೋಮೆಟ್ರಿಕ್) ಪಡೆಯದೇ ವಿತರಿಸಲು ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿ ಮಾಲಕರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದೆ.
ಪಡಿತರ ಚೀಟಿದಾರರು ಆಧಾರ ಜತೆ ಜೋಡಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ನೀಡಿ ವಿತರಿಸಲಾಗುವುದು. ವಯೋವೃದ್ಧರು, ಅನಾರೋಗ್ಯ ಪೀಡಿತರು ಮತ್ತು ವಿಶೇಷಚೇತನರಿಗೆ ವಿನಾಯಿತಿ ಸೌಲಭ್ಯದಡಿ ಪಡಿತರ ವಿತರಿಸಲಾಗುವುದು. ಪಡಿತರ ಚೀಟಿದಾರರ ಪರಿಶೀಲನಾ ಪಟ್ಟಿ(ಚೆಕ್ಲಿಸ್ಟ್) ಕೈಬಿಲ್ಲು(ಮ್ಯಾನುಯಲ್) ಮೂಲಕವೂ ಪಡಿತರವನ್ನು ಪಡಿತರ ಚೀಟಿದಾರರಿಗೆ ನೇರವಾಗಿ ವಿತರಣೆ ಮಾಡಲಾಗುವುದು. ಜತೆಗೆ ಈ ಪಡಿತರ ಪಡೆಯಲು ರಾಜ್ಯ ಮತ್ತು ಹೊರರಾಜ್ಯದ ಪಡಿತರ ಚೀಟಿದಾರರಿಗೆ ಪೋರ್ಟೆಬಿಲಿಟಿ ಸೌಲಭ್ಯದ ಮೂಲಕ ಪಡಿತರ ವಿತರಣೆ ಸಹ ನೀಡಲಾಗಿದೆ.
ಯಾವುದೇ ಪಡಿತರ ಚೀಟಿದಾರರಿಗೆ ಅನಾನುಕೂಲವಾದಲ್ಲಿ ಅವರು ತಮ್ಮ ದೂರುಗಳನ್ನು ಬೆಂಗಳೂರಿನ ಆಯುಕ್ತಾಲಯದ ನಿಯಂತ್ರಣ ಕೊಠಡಿ ಸಂಖ್ಯೆ 1967, 1800-425-9339 ಮತ್ತು 14445 ದಾಖಲಿಸಲು ಕೋರಿದೆ ಹಾಗೂ ಸಂಬಂಧಿಸಿದ ಗ್ರಾಪಂಗಳಿಗೆ ಅಥವಾ ತಹಶೀಲ್ದಾರ್ ರವರಿಗೆ ದೂರು ಸಲ್ಲಿಸಲು ಕೋರಿದೆ.