''ರಾಜ್ಯಕ್ಕೆ ಲಸಿಕೆ ನೀಡದೆ ಗುಜರಾತಿಗೆ ನೀಡುವಾಗ ಸಂಸದರು ಬಾಯಿ ಮುಚ್ಚಿಕೊಂಡಿದ್ದು ಸರಿಯೇ ?''
ಸದಾನಂದಗೌಡರಿಗೆ ಡಿ.ಕೆ.ಶಿವಕುಮಾರ್ ಪ್ರಶ್ನೆ
ಬೆಂಗಳೂರು, ಮೇ 14: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನಾವೇನು ನೇಣು ಹಾಕಿಕೊಳ್ಳಬೇಕಾ ಎಂದು ಕೇಳುತ್ತಾರೆ? `ಸದಾನಂದಗೌಡರೇ, ನೀವು ಕಾನೂನು ಸಚಿವರಾಗಿದ್ದವರು, ಮುಖ್ಯಮಂತ್ರಿಯಾಗಿದ್ದವರು. ನೀವು ನೇಣು ಹಾಕಿಕೊಳ್ಳಿ ಎಂದು ನಾವು ಹೇಳುವುದಿಲ್ಲ. ಆದರೆ ನೀವು ಲಸಿಕೆ ಕೊಡಲಿಲ್ಲ ಎಂದು ನಿಮಗೆ ಮತ ಹಾಕಿದವರು ನೇಣು ಹಾಕಿಕೊಳ್ಳಬೇಕಾ? ಜನ ನಿಮ್ಮ ಮಾತಿಗೆ ನಗುತ್ತಿದ್ದಾರೆ. ಕೇಂದ್ರ ಸರಕಾರ ರಾಜ್ಯಕ್ಕೆ ಲಸಿಕೆ ನೀಡದೇ ಗುಜರಾತಿಗೆ ನೀಡುತ್ತಿರುವಾಗ ನೀವೂ ಸೇರಿ ರಾಜ್ಯದ 25 ಸಂಸದರು ಬಾಯಿ ಮುಚ್ಚಿಕೊಂಡಿದ್ದೀರಿ, ಇದು ಸರಿಯೇ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಏರ್ಪಡಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಇನ್ನು ಆಡಳಿತ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ನ್ಯಾಯಾಧೀಶರು ಸರ್ವಜ್ಞರೇ ಎಂದು ಪ್ರಶ್ನಿಸಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗಿದೆ. ನ್ಯಾಯಾಲಯದ ತೀರ್ಪುಗಳನ್ನು ನೆಲದ ಕಾನೂನು ಎಂದು ಪರಿಗಣಿಸುವಾಗ ಸಿ.ಟಿ.ರವಿ ಅವರು ಈ ರೀತಿ ಹೇಳಿರುವುದು ಅಪರಾಧ. ದಾರಿ ತಪ್ಪಿದಾಗ ಶಾಸಕಾಂಗವನ್ನು ಸರಿ ದಾರಿಗೆ ತರುವುದು ನ್ಯಾಯಾಂಗದ ಕರ್ತವ್ಯ. ನ್ಯಾಯಾಲಯಕ್ಕೆ ಅಗೌರವ ತಂದಿರುವುದು ಸರಿಯಲ್ಲ. ಇದಕ್ಕೆ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಹೊಣೆ ಹೊರಬೇಕು' ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲ ಅಭಿವೃದ್ಧಿ ಕೆಲಸ ನಿಲ್ಲಿಸಿ ಜನರ ಪ್ರಾಣ ರಕ್ಷಿಸುವುದು ನಮ್ಮ ಕರ್ತವ್ಯ. ಹೀಗಾಗಿ ಸ್ಥಳೀಯ ಅಭಿವೃದ್ಧಿಗಾಗಿ ಶಾಸಕರಿಗೆ ನೀಡಲಾಗುವ ಹಣವನ್ನು ಸಂಗ್ರಹಿಸಿ ರಾಜ್ಯದ ಜನರಿಗೆ ಉಚಿತ ಲಸಿಕೆ ನೀಡಲು ಕೆಪಿಸಿಸಿ ವತಿಯಿಂದ 100 ಕೋಟಿ ರೂ.ಯೋಜನೆಯನ್ನು ಪ್ರಕಟಿಸುತ್ತಿದ್ದೇವೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಅನುಮತಿ ನೀಡಬೇಕು. ನಾವಿದನ್ನು ಅತ್ಯಂತ ಪಾರದರ್ಶಕವಾಗಿ ನಿಭಾಯಿಸುತ್ತೇವೆ. ಈ ಯೋಜನೆ ಅನುಷ್ಠಾನಕ್ಕೆ ನೀಲನಕ್ಷೆ ನೀಡುತ್ತೇವೆ ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದರು.
ರಾಜ್ಯದ ಜನರಿಗೆ ಲಸಿಕೆ ನೀಡುವಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯವನ್ನು ಪಕ್ಷದ ವತಿಯಿಂದ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಅನುಮತಿ ನೀಡಬೇಕಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಆತ್ಮನಿರ್ಭರ ಭಾರತದ ಮನೋಭಾವದಲ್ಲಿ ಉತ್ಪಾದಕರಿಂದ ಕಾಂಗ್ರೆಸ್ ನೇರವಾಗಿ ಲಸಿಕೆ ಖರೀದಿಸಿ, ಅದನ್ನು ಜನರಿಗೆ ವಿತರಿಸಲು ಅನುಮತಿ ನೀಡಬೇಕು ಎಂದು ಶಿವಕುಮಾರ್ ಸರಕಾರಕ್ಕೆ ಮನವಿ ಮಾಡಿದರು.
ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಿಸಲು ಕಾಂಗ್ರೆಸ್ 100 ಕೋಟಿ ರೂ.ಯೋಜನೆ ರೂಪಿಸಿದೆ. ಇದರಲ್ಲಿ 10 ಕೋಟಿ ರೂ.ಗಳನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನಿಧಿಯಿಂದ ನೀಡಲಾಗುವುದು. ಉಳಿದ 90 ಕೋಟಿ ರೂ.ಗಳನ್ನು ಕಾಂಗ್ರೆಸ್ ಶಾಸಕರು ಹಾಗೂ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯ ಮೂಲಕ ಸಂಗ್ರಹಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ವಿವರ ನೀಡಿದರು.
ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಲಸಿಕೆ ಪೂರೈಕೆಗೆ ಜಾಗತಿಕ ಟೆಂಡರ್ ಕರೆಯುತ್ತಿರುವುದಾಗಿ ಹೇಳುತ್ತಿದ್ದಾರೆ. ಇದರಲ್ಲಿ ಎಲ್ಲವೂ ಪಾರದರ್ಶಕವಾಗಿರಬೇಕು. ಇಲ್ಲಿ ಯಾರಿಗೆ ಎಷ್ಟು ಪರ್ಸೆಂಟ್ ಎಂದು ಚರ್ಚೆ ನಡೆಯುತ್ತಿರುವುದು ನಮಗೆ ಗೊತ್ತಿದೆ. ಮುಖ್ಯಮಂತ್ರಿಯವರೇ ನಿಮ್ಮ ಗಮನಕ್ಕೆ ಬಾರದೇ ಈ ಕೆಲಸ ನಡೆಯುತ್ತಿದೆ. ಜನರ ಹಣ ಲಪಟಾಯಿಸಿದರೆ ನಾವು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ ಎಂದು ಶಿವಕುಮಾರ್ ಇದೇ ವೇಳೆ ಎಚ್ಚರಿಕೆ ನೀಡಿದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸತ್ತವರ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಬೇಕು. ಇಂದಿರಾ ಕ್ಯಾಂಟೀನ್ನಲ್ಲಿ ಗುರುತಿನ ಚೀಟಿ ಇಲ್ಲದೇ ಉಚಿತ ಆಹಾರ ನೀಡಲಾಗುವುದು ಎಂದು ಸರಕಾರ ಹೇಳಿತ್ತು. ಆದರೆ ನಾವು ರಿಯಾಲಿಟಿ ಚೆಕ್ ಮಾಡಿದಾಗ ಗೊತ್ತಾಗಿದ್ದೇ ಬೇರೆ. ಒಬ್ಬ ವ್ಯಕ್ತಿ ಒಂದು ಊಟ ಪಡೆಯಲು ಸರಕಾರ ಆತನ ಗುರುತಿನ ಚೀಟಿ ಕೇಳುತ್ತಿರುವುದು ದೇಶಕ್ಕೆ ನಾಚಿಕೆ ತರುವ ಕೆಲಸ. ಜನಸಾಮಾನ್ಯನ ಘನತೆಗೆ ಧಕ್ಕೆ ತರುವ ವಿಚಾರ ಎಂದು ಡಿ.ಕೆ.ಶಿವಕುಮಾರ್ ಟೀಕಿಸಿದರು.